‘ನಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಕೆರೆಕೋಡಿಗಳನ್ನು ನುಂಗಿದವರನ್ನು ಖಾಲಿ ಮಾಡಿಸುತ್ತೇವೆ’ ಎಂಬ ಜೆಡಿಎಸ್ ನಾಯಕ ಎಚ್.ಡಿ.ಕುಮಾರಸ್ವಾಮಿ ಅವರ ಹೇಳಿಕೆಗೆ, ‘ನ್ಯಾಯ ಕೊಡಿಸಲು ಅಧಿಕಾರವೇ ಬೇಕೆ?’ ಎಂದು ಪತ್ತಂಗಿ ಎಸ್. ಮುರಳಿ ಕೇಳಿದ್ದಾರೆ (ವಾ.ವಾ., ಮೇ 12). ಇದಕ್ಕೆ ನನ್ನ 100 ಪ್ರತಿಶತ ಸಹಮತವಿದೆ.
ಕುಮಾರಸ್ವಾಮಿ ಅವರು ‘ನನ್ನ ಸುದ್ದಿಗೆ ಬಂದರೆ ನಿಮ್ಮೆಲ್ಲಾ ಜಾತಕ ಬಿಚ್ಚಿಡುತ್ತೇನೆ. ನನ್ನ ಬಳಿ ದಾಖಲೆ ಇದೆ’ ಎಂದು ಹೇಳುವುದು ಇದೇನೂ ಮೊದಲಲ್ಲ. ಹಾಗಿದ್ದರೆ ಅವರ ಈ ಮಾತಿನ ಅರ್ಥ ಏನು? ನನ್ನ ತಂಟೆಗೆ ಬಂದರೆ ಮಾತ್ರ ನಿಮ್ಮ ಭ್ರಷ್ಟಾಚಾರ ಬಯಲು ಮಾಡುತ್ತೇನೆ ಎಂದೇ? ಇದು ಸರಿಯೇ? ತಪ್ಪು ಯಾರೇ ಮಾಡಲಿ, ಅವರ ಬಗ್ಗೆ ದಾಖಲೆ ಇದ್ದರೆ ಅದನ್ನು ‘ಬಹುಜನ ಹಿತಾಯ’ ಅನ್ನುವ ಹಾಗೆ, ಸಾರ್ವಜನಿಕ ಹಿತಾಸಕ್ತಿಯಿಂದ ಬಿಡುಗಡೆ ಮಾಡಬೇಕಲ್ಲವೇ? ನೀವು ಅಧಿಕಾರದಲ್ಲಿ ಇರುವವರನ್ನು ಓಲೈಸಬೇಕಾದ ಅಗತ್ಯ ಇಲ್ಲದಿದ್ದರೆ ಅದನ್ನು ಬಿಡುಗಡೆ ಮಾಡಿ, ಸಮಾಜದಲ್ಲಿರುವ ಭ್ರಷ್ಟಾಚಾರ ಅಷ್ಟೋ ಇಷ್ಟೋ ಕಡಿಮೆಯಾದರೆ ಅದರ ಶ್ರೇಯಸ್ಸು ನಿಮಗೇ ಅಲ್ಲವೇ?
ಎ.ವಿ.ಮುರಳೀಧರ ಆಚಾರ್ಯ,ಬೆಂಗಳೂರು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.