ADVERTISEMENT

ವಾಚಕರ ವಾಣಿ: ಭಾಷೆಯಾಗಿ ಕನ್ನಡ ಕಲಿಸಬೇಕಿದೆ

​ಪ್ರಜಾವಾಣಿ ವಾರ್ತೆ
Published 1 ನವೆಂಬರ್ 2021, 22:15 IST
Last Updated 1 ನವೆಂಬರ್ 2021, 22:15 IST

ಕಲಿಕೆಗಾಗಿ ನಮ್ಮ ಕರ್ನಾಟಕಕ್ಕೆ ಬರುವ ಹೊರಗಿನ ವಿದ್ಯಾರ್ಥಿಗಳಿಗೆ ಕನ್ನಡವನ್ನು ಕಡ್ಡಾಯಗೊಳಿಸುವಂತಿಲ್ಲ, ಅದು ಅವರ ಮೇಲೆ ಒತ್ತಡ ಹೇರಿದಂತಾಗುತ್ತದೆಂದು ಹೈಕೋರ್ಟ್‌ ಹೇಳಿರುವುದು ಸುದ್ದಿಯಾಗಿದೆ. ಇದರ ಬಗ್ಗೆ ಮಾಧ್ಯಮಗಳಲ್ಲಿ ಹಲವು ವಿಭಿನ್ನ ಅಭಿಪ್ರಾಯಗಳು ಕೂಡ ಚರ್ಚೆಯಾಗುತ್ತಿವೆ. ನ್ಯಾಯಾಲಯವು ಪ್ರಕರಣವನ್ನು ಮುಂದೂಡಿದೆ. ಮರುಪರಿಶೀಲನೆ ನಡೆಸಿ ಅಭಿಪ್ರಾಯ ತಿಳಿಸುವಂತೆರಾಜ್ಯ ಸರ್ಕಾರಕ್ಕೆ ಸೂಚಿಸಿದೆ ಎಂಬುದೂ ಇಲ್ಲಿ ಮುಖ್ಯ. ಆದರೆ ನಾವು ಆಲೋಚಿಸುವಂತೆ ಅಂಕ ಆಧಾರಿತವಾದುದು ಒತ್ತಡದ ಕಲಿಕೆಗೆ ಹೆಚ್ಚು ಕಾರಣವಾಗಿರುತ್ತದೆ.

ಅಂಕವನ್ನೇ ಮುಖ್ಯವಾಗಿಸದೆ ಒಂದು ಭಾಷೆಯಾಗಿ ಕನ್ನಡವನ್ನು ಕಲಿಸಿದರೆ ಕನ್ನಡೇತರರೂ ಕಡ್ಡಾಯವಾಗಿ ಕನ್ನಡವನ್ನು ಕಲಿಯುತ್ತಾರೆ. ಇದಕ್ಕೆ ಪೂರಕವಾಗಿ ಎಂಜಿನಿಯರಿಂಗ್, ವೈದ್ಯಕೀಯ ಮುಂತಾದ ಕೋರ್ಸ್‌ಗಳಲ್ಲಿ ಕನ್ನಡವನ್ನು ಒಂದು ಬಳಕೆಯ ಭಾಷೆಯಾಗಿ ಕಲಿಸಲಾಗುತ್ತಿದ್ದು, ಇದು ಯಶಸ್ಸು ಕೂಡ ಕಂಡಿದೆ. ಇದು ಮುಂದಿನ ದಿನಗಳಲ್ಲಿ ವೃತ್ತಿಯನ್ನು ನಿರ್ವಹಿಸಲು ಹಾಗೂ ಇಲ್ಲಿನ ಜನಜೀವನ, ಸಂಸ್ಕೃತಿಯನ್ನು ಅರ್ಥಮಾಡಿಕೊಳ್ಳಲೂ ಸಾಧ್ಯವಾಗಿಸಿದೆ. ಆದ್ದರಿಂದ ನಮ್ಮ ಸರ್ಕಾರವು ಈ ದಿಸೆಯಲ್ಲಿ ನ್ಯಾಯಾಲಯಕ್ಕೆ ಮನವರಿಕೆ ಮಾಡಿಕೊಡಬಹುದಾಗಿದೆ. ಜೊತೆಗೆ ಪ್ರಾಥಮಿಕ ತಿಳಿವಳಿಕೆಯ ಸಾಧನವಾಗಿ ಹೊರಗಿನವರಿಗೆ ಮಾತ್ರ ಹೀಗೆ ಪ್ರತ್ಯೇಕ ವಿಧಾನದಿಂದ ಕಲಿಸಲು ಚಿಂತನೆ ಮಾಡಬಹುದಾಗಿದೆ.

ಡಾ. ಸಂಪತ್ ಬೆಟ್ಟಗೆರೆ,ಮೂಡಿಗೆರೆ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.