ಮಾಲೂರು ತಾಲ್ಲೂಕಿನ ಉಳ್ಳೇರಹಳ್ಳಿಯಲ್ಲಿ ದೇವರ ಗುಜ್ಜುಕೋಲು ಮುಟ್ಟಿದ ಕಾರಣಕ್ಕಾಗಿ ಹಲ್ಲೆಗೆ ಒಳಗಾಗಿದ್ದ ಸಂತ್ರಸ್ತ ಬಾಲಕನ ಕುಟುಂಬ ದವರನ್ನು ಭೇಟಿಯಾಗಿ ಕಾಂಗ್ರೆಸ್ ಮುಖಂಡ ಆರ್. ಧರ್ಮಸೇನ ಅವರು ಸಾಂತ್ವನ ಹೇಳಿರುವುದು ಮೆಚ್ಚುವಂಥ ನಡೆ. ದಲಿತರ ಮೇಲೆ ದೌರ್ಜನ್ಯ ಪ್ರಕರಣಗಳಿಗೆ ಕಡಿವಾಣ ಹಾಕದಿದ್ದರೆ, ದಲಿತರ ರಕ್ಷಣೆಗೆ ಮುಂದಾಗದಿದ್ದರೆ ಈ ಸರ್ಕಾರ ಹೆಚ್ಚು ದಿನ ಇರುವುದಿಲ್ಲ ಎಂದು ಅವರು ಎಚ್ಚರಿಕೆ ನೀಡಿರುವುದೂ ಸ್ವಾಗತಾರ್ಹ. ಆದರೆಗ್ರಾಮದ ಕೆಲವು ಮೂರ್ಖರು ವಿಧಿಸಿದ ದಂಡವನ್ನು ಕೆಪಿಸಿಸಿ ವತಿಯಿಂದ ಕಟ್ಟಲು ಸಿದ್ಧ ಎಂದು ಹೇಳಿರುವುದು ಸರಿಯಲ್ಲ. ಆ ಮಾತು ಕೃತಿಗೆ ಇಳಿದರೆ, ಮೂಢನಂಬಿಕೆಗೆ ತಲೆಬಾಗಿದಂತೆ ಆಗುವುದಿಲ್ಲವೇ?
ಅದೇ ದಿನ (ಪ್ರ.ವಾ., ಸೆ. 25) ‘ಭೇದ ಭಾವದ ಧರ್ಮ ಬೇಕಿಲ್ಲ’ ಎಂಬ ಶೀರ್ಷಿಕೆಯಡಿಪ್ರಕಟವಾದ ವರದಿಯಲ್ಲಿ, ‘ಯಾವ ದೇವರೂ ಬೇಡ, ಯಾವ ದೇವಸ್ಥಾನವೂ ಅಗತ್ಯವಿಲ್ಲ. ಬುದ್ಧ, ಬಸವಣ್ಣ, ಅಂಬೇಡ್ಕರ್, ಪೆರಿಯಾರ್, ಫುಲೆ ಮತ್ತು ಕುವೆಂಪು ಹೇಳಿರುವ ಸಮಾನತೆ, ನ್ಯಾಯ ಹಾಗೂ ವೈಜ್ಞಾನಿಕ ಮನೋಭಾವ ಬೇಕಿದೆ’ ಎಂದು ಹೇಳಿರುವ ನಟ ಚೇತನ್ ಅಹಿಂಸಾ ಅವರ ಮಾತು ಸಾಂದರ್ಭಿಕವಾಗಿದೆ. ಭೇದಭಾವ ಮಾಡಿದವರಿಗೆ ಕಾನೂನು ಪ್ರಕಾರ ಕಠಿಣ ಶಿಕ್ಷೆಯಾಗಬೇಕು ಎಂಬುದು ಪ್ರಜ್ಞಾವಂತ ನಾಗರಿಕರ ಆಶಯ.
⇒ಡಾ. ಎಸ್.ಡಿ. ರಂಗಸ್ವಾಮಿ,ಹಾಸನ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.