ADVERTISEMENT

ಗ್ರಂಥಾಲಯ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯ

​ಪ್ರಜಾವಾಣಿ ವಾರ್ತೆ
Published 26 ಜನವರಿ 2021, 19:30 IST
Last Updated 26 ಜನವರಿ 2021, 19:30 IST

ಪ್ರೊ. ಕೆ.ಎಸ್.ಭಗವಾನ್‌ ಅವರ ‘ರಾಮಮಂದಿರ ಏಕೆ ಬೇಡ?’ ಎಂಬ ಕೃತಿಯನ್ನು ಗ್ರಂಥಾಲಯ ಆಯ್ಕೆ ಸಮಿತಿಯು ಖರೀದಿಗಾಗಿ ಆಯ್ಕೆ ಮಾಡಿತ್ತು. ಆದರೂ ಜನರ ಧಾರ್ಮಿಕ ಭಾವನೆಗಳಿಗೆ ನೋವುಂಟು ಮಾಡುತ್ತದೆ ಎಂಬ ಕಾರಣಕ್ಕೆ ಈ ಪುಸ್ತಕವನ್ನು ಖರೀದಿ ಮಾಡಿಲ್ಲ ಎಂದು ಶಿಕ್ಷಣ ಸಚಿವ ಸುರೇಶ್‌ ಕುಮಾರ್‌ ಹೇಳಿದ್ದಾರೆ. ಗ್ರಂಥಾಲಯದಲ್ಲಿ ಅನೇಕ ವಿಚಾರಧಾರೆಯ ಪುಸ್ತಕಗಳಿರುತ್ತವೆ. ಓದುಗನಿಗೆ ಆಯ್ಕೆಯ ಸ್ವಾತಂತ್ರ್ಯ ಇರುತ್ತದೆ. ಅದನ್ನು ಕಸಿದುಕೊಳ್ಳುವ ಮೂಲಕ ಸರ್ಕಾರವು ಸಂವಿಧಾನ ನೀಡಿದ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಉಲ್ಲಂಘಿಸಿದೆ.

ಗ್ರಂಥಾಲಯದಲ್ಲಿ ವೇದಶಾಸ್ತ್ರಗಳಿರುತ್ತವೆ. ‘ವೇದಕ್ಕೆ ಒರೆಯ ಕಟ್ಟುವೆ, ಶಾಸ್ತ್ರಕ್ಕೆ ನಿಗಳನಿಕ್ಕುವೆ, ಆಗಮದ ಮೂಗ ಕೊಯ್ವೆ ನೋಡಾ’ ಎಂಬಂತಹ ಬಸವಣ್ಣನವರ ವಚನಗಳಿರುತ್ತವೆ. ಮನುಸ್ಮೃತಿಯೂ ಇರುತ್ತದೆ. ಅದನ್ನು ಸುಟ್ಟ ಅಂಬೇಡ್ಕರ್‌ ಅವರ ವೈಚಾರಿಕ ಪುಸ್ತಕಗಳೂ ಇರುತ್ತವೆ. ಓದುಗರು ತಮಗೆ ಬೇಕೆನಿಸಿದ್ದನ್ನು ಓದುತ್ತಾರೆ. ಓದುಗರ ಸ್ವಾತಂತ್ರ್ಯ ಕಸಿದ ಇಂತಹ ಕ್ರಮವನ್ನು ಒಬ್ಬ ಓದುಗನಾಗಿ ಪ್ರಶ್ನಿಸುತ್ತೇನೆ. ಏಕಮುಖಿ ವಿಚಾರವನ್ನು ಪ್ರತಿಪಾದಿಸುವ ನಿಲುವನ್ನು ಒಬ್ಬ ಬರಹಗಾರನಾಗಿ ಖಂಡಿಸುತ್ತೇನೆ.

ಅಲ್ಲಮಪ್ರಭು ಬೆಟ್ಟದೂರು,ಕೊಪ್ಪಳ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.