‘ಬಾಹುಬಲಿಯ ಅಧಿಕಾರ ತ್ಯಾಗ ನಮಗೇಕೆ ಆದರ್ಶ ವಾಗುತ್ತಿಲ್ಲ’ ಎಂಬ ಪ್ರಶ್ನೆಯನ್ನು ಎತ್ತಿದ್ದಾರೆ ವೈ.ಗ. ಜಗದೀಶ್ (ಪ್ರ.ವಾ., ಅ. 19). ಈ ಪ್ರಶ್ನೆಗೆ ಉತ್ತರ ಕಂಡುಕೊಳ್ಳಲು ಯತ್ನಿಸಿದಾಗ ನಾವು ಸೀದಾ ಹೋಗಿ ನಿಲ್ಲುವುದು ‘ಕೊಳ್ಳುಬಾಕ ಸಂಸ್ಕೃತಿ’ಯ ಮುಂದೆ.
ಸರಳ ಜೀವನಕ್ಕೆ ಇಂದು ಗ್ರಾಮೀಣ ಜನರೂ ಒಪ್ಪುವುದಿಲ್ಲ. ಗುಡಿಸಲುಗಳಲ್ಲೂ ಅಧಿಕಾರ ಚಲಾಯಿಸುತ್ತಿರುವ ಟಿ.ವಿ.ಯು ಐಷಾರಾಮಿ ಬದುಕಿನ ಪಾಠವನ್ನು ಎಲ್ಲರಿಗೂ ಹೇಳಿಕೊಡುತ್ತಿದೆ. ಹೀಗಾಗಿ ಕಡುಬಡವರೂ ಐಷಾರಾಮಿ ಬದುಕನ್ನು ಸಾಧ್ಯವಾಗಿಸಿಕೊಳ್ಳಲು ಹೆಣಗಾಡುತ್ತಾರೆ. ಆದರೆ ಆ ಗುರಿ ತಲುಪಲು ಹಿಡಿದಿರುವ ಹಾದಿ ಮಾತ್ರ ಅಕ್ರಮದ್ದು.
ನ್ಯಾಯವಾದ ಹಾದಿಯಲ್ಲಿ ದುಡಿಯುವ ವ್ಯವಧಾನ ಯಾರಲ್ಲೂ ಇಲ್ಲ. ಇದರಿಂದಾಗಿ ಕೊಲೆ, ಸುಲಿಗೆ, ಮೋಸ, ವಂಚನೆ, ಕಳ್ಳತನ... ಎಗ್ಗಿಲ್ಲದೆ ನಡೆಯುತ್ತಿವೆ. ಈ ಎಲ್ಲದರ ಹಿಂದೆ, ಕೊಳ್ಳುಬಾಕ ಸಂಸ್ಕೃತಿಯನ್ನು ಹುಟ್ಟುಹಾಕಿದ ಬಂಡವಾಳಶಾಹಿ ರಾಕ್ಷಸರು ಕೇಕೆ ಹಾಕಿ ಅಟ್ಟಹಾಸಗೈಯುತ್ತಿದ್ದಾರೆ. ಎಲ್ಲರಲ್ಲೂ ಇಂಥ ಮನಸ್ಥಿತಿ ಗಟ್ಟಿಯಾಗುತ್ತಿರುವಾಗ ರಾಜಕಾರಣಿಗಳಾದರೂ ಏನು ಮಾಡಬೇಕು?
–ಹುರುಕಡ್ಲಿ ಶಿವಕುಮಾರ, ಬಾಚಿಗೊಂಡನಹಳ್ಳಿ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.