ಪ್ರಪಂಚದಾದ್ಯಂತ ಮಾನವ ಸಮಾಜದಲ್ಲಿ ಧರ್ಮ, ಜನಾಂಗ, ಪಂಥಗಳ ಹೆಸರಿನಲ್ಲಿ ಹಬ್ಬುತ್ತಿರುವ ಅಸಹಿಷ್ಣುತೆಯ ವಾತಾವರಣದ ನಡುವೆಯೂ ಅಬುಧಾಬಿಯಲ್ಲಿ ನಡೆದ ಸೌಹಾರ್ದ ಸಮಾವೇಶ ಗಮನ ಸೆಳೆದಿದೆ. ಈ ಕುರಿತ ಲೇಖನ (ಪ್ರ.ವಾ., ಫೆ. 13, ಸುಧೀಂದ್ರ ಕುಲಕರ್ಣಿ) ಸರ್ವ ಜನಾಂಗದ ಕಣ್ತೆರೆಸುವಂತಿದೆ.
ಧರ್ಮ, ಜನಾಂಗ, ಜಾತಿ, ಪಂಗಡದ ಹೆಸರಿನಲ್ಲಿ ಜನರು ಕ್ಷುಲ್ಲಕ ಕಾರಣಕ್ಕಾಗಿ ಪರಸ್ಪರ ದ್ವೇಷಿಸುತ್ತಾ, ಕೊಲೆ, ರಕ್ತಪಾತಗಳಿಗೆ ಕಾರಣ
ವಾಗುತ್ತಿರುವ ಇಂದಿನ ವಿಷಮ ಪರಿಸ್ಥಿತಿಯಲ್ಲಿ, ಎಲ್ಲರೂ ಒಟ್ಟಾಗಿ ಸಮೃದ್ಧಿಯತ್ತ ಸಾಗೋಣ ಎಂಬ ಗುರು ಬ್ರಹ್ಮವಿಹಾರಿ ಸ್ವಾಮಿ ಅವರ ಪ್ರತಿಪಾದನೆ ಸಕಾಲಿಕ. ನಾವು ಜೊತೆಯಾಗಿ ಭವಿಷ್ಯ ಕಟ್ಟುತ್ತೇವೆ ಎಂಬ ಪೋಪ್ ಫ್ರಾನ್ಸಿಸ್ ಅವರ ಚಿಂತನೆ ವಿಶ್ವ ಏಕತೆ, ಧಾರ್ಮಿಕ ಸಹಿಷ್ಣುತೆ, ಕೋಮು ಸೌಹಾರ್ದಕ್ಕೆ ಮೂಲಾಧಾರವಾಗಿದೆ.
ಸೌಹಾರ್ದ ಮೆರೆಯುವ ಇಂತಹ ಕಾರ್ಯಕ್ರಮಗಳು ಬಹುಸಂಖ್ಯಾತ, ಬಹು ಸಂಸ್ಕೃತಿ, ಬಹುತ್ವ ಪರಂಪರೆ, ಬಹುಮುಖಿ ಸಮಾಜದ ಭಾರತದಲ್ಲಿ ಹೆಚ್ಚಾಗಬೇಕು. ವಿಭಿನ್ನ ಧಾರ್ಮಿಕ ನಂಬಿಕೆಗಳನ್ನು, ಸಂಸ್ಕೃತಿ, ಪರಂಪರೆಯ ಸಾರವನ್ನು ಅರಿತುಕೊಳ್ಳುವ, ಗೌರವಿಸುವ ಹಿನ್ನೆಲೆಯಲ್ಲಿ ಜೀವಪರ ಕಾಳಜಿಯ ಮಾನವೀಯ ಬರಹ ಪ್ರಕಟಿಸಿದ ಪತ್ರಿಕೆಗೆ ಅಭಿನಂದನೆ.
ರಾಘವೇಂದ್ರ ಹಾರಣಗೇರಾ, ಶಹಾಪುರ, ಯಾದಗಿರಿ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.