ಬೆಂಗಳೂರಿನಲ್ಲಿ ಮೇ 20ರಂದು ಕೇಳಿಬಂದ ಸ್ಫೋಟದ ಸದ್ದಿಗೆ ಯುದ್ಧವಿಮಾನ ಹಾರಾಟ ಕಾರಣವಲ್ಲವೆಂದೂ ಬಂಗಾಳದಲ್ಲಿ ಬೀಸಿಬಂದ ಅಂಪನ್ ಚಂಡಮಾರುತವೇ ಕಾರಣವೆಂದೂ ಭೂವಿಜ್ಞಾನಿ ಡಾ. ಎಚ್.ಎಸ್.ಎಂ. ಪ್ರಕಾಶ್ ಅವರು ಹೇಳಿರುವುದು ವರದಿಯಾಗಿದೆ (ಪ್ರ.ವಾ., ಮೇ 25). ಹಾಗಿದ್ದರೆ ಈ ಸದ್ದು ಚೆನ್ನೈ, ಕೊಲಂಬೊ, ಪುರಿ ಮುಂತಾದವನ್ನೆಲ್ಲ ಬಿಟ್ಟು ಬೆಂಗಳೂರಿಗೇ ಏಕೆ ಅಪ್ಪಳಿಸಿತೆಂದು ಅವರು ಸ್ಪಷ್ಟಪಡಿಸಿಲ್ಲ. ಅಂಪನ್ ಚಂಡಮಾರುತಕ್ಕೆ ಜಾವಾದ ಮಹಾಶಕ್ತಿಶಾಲಿ ಸೆಮೇರು ಜ್ವಾಲಾಮುಖಿ ಕಾರಣವೆಂದು ಹೇಳಿದ್ದಾರೆ. ಅದು ತೀರಾ ಸಾಮಾನ್ಯ ಜ್ವಾಲಾಮುಖಿಯಾಗಿದ್ದು, ಅದರ ಹೊಗೆದೂಳು ಪೂರ್ವಕ್ಕೆ ಹೊರಟುಹೋಗಿದೆ.
ಕೆಲ ದಿನಗಳ ಹಿಂದೆ ಇದೇ ಭೂವಿಜ್ಞಾನಿ ಕೊರೊನಾ ವೈರಾಣುವಿಗೂ ಬೇರೊಂದು ಜ್ವಾಲಾಮುಖಿ ಕಾರಣವೆಂದು ಹೇಳಿದ್ದರು. ಇಂಥ ನಿರಾಧಾರ ಹೇಳಿಕೆಗಳ ಜೊತೆಗೆ ಇದೀಗ, ‘ಕೊಡಗು ಅಥವಾ ಉತ್ತರ ಕರ್ನಾಟಕದಲ್ಲಿ ಮಹಾಪೂರದ ಸಾಧ್ಯತೆ ಶೇ 98ರಷ್ಟು ಕಡಿಮೆ’ ಎಂದು ಭವಿಷ್ಯವನ್ನೂ ಹೇಳಿದ್ದಾರೆ! ಹವಾಮಾನ ತಜ್ಞರಿಗೂ ಗೊತ್ತಿರದ ಹೊಸದೇನೋ ಇವರಿಗೆ ಹೊಳೆದಿರಲು ಸಾಕು. ಹಾಗಿದ್ದ ಪಕ್ಷದಲ್ಲಿ ತಮ್ಮ ವಿಚಾರಗಳನ್ನು ವೃತ್ತಿಪರ ವೇದಿಕೆಗಳಲ್ಲಿ ಮೊದಲು ಮಂಡಿಸಿ, ಅಲ್ಲಿ ಮಾನ್ಯತೆ ಪಡೆದ ನಂತರವೇ ಜನರ ಮುಂದಿಡಬೇಕಾದುದು ವೈಜ್ಞಾನಿಕ ವಿಧಾನ. ಅದನ್ನು ಬಿಟ್ಟು ನಮ್ಮಂಥ ವಿಜ್ಞಾನ ವೀಕ್ಷಕರ ತರ್ಕಕ್ಕೂ ಸಿಗದ ಹೇಳಿಕೆಗಳನ್ನು ಮತ್ತು ಸ್ವಂತದ ಊಹೆಗಳನ್ನು ಹೀಗೆ ಮಾಧ್ಯಮಗಳಿಗೆ ಹರಿಬಿಡುತ್ತ ಹೋದರೆ ವಿಜ್ಞಾನಿಗಳಿಗೂ ಬುರುಡೆ ಬಾಬಾಗಳಿಗೂ ವ್ಯತ್ಯಾಸವೇ ಇಲ್ಲ
ದಂತಾಗುತ್ತದೆ.
- ಡಾ. ಎಂ.ವೆಂಕಟಸ್ವಾಮಿ, ನಾಗೇಶ ಹೆಗಡೆ, ಟಿ.ಆರ್.ಅನಂತರಾಮು, ಡಾ. ಜಿ.ಶ್ರೀನಿವಾಸ ರೆಡ್ಡಿ, ಡಾ. ವಿ.ಎಸ್.ಪ್ರಕಾಶ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.