ಮಗನೇ ತನ್ನ ಸರ್ವಸ್ವ ಎಂದು ಬೆಳೆಸಿದ ತಾಯಿಗೆ ಆತ ಅಡ್ಡದಾರಿ ಹಿಡಿದಾಗ ಏನಾಗಬೇಡ? ಹೈದರಾಬಾದಿನಲ್ಲಿ ತನ್ನ ಮಗ ಗಾಂಜಾ ವ್ಯಸನದಿಂದ ಹಾದಿ ತಪ್ಪುತ್ತಿರುವುದನ್ನು ಸಹಿಸಲಾರದೇ ತಾಯಿಯೊಬ್ಬಳು ಅವನ ಕಣ್ಣಿಗೆ ಖಾರದ ಪುಡಿ ಎರಚಿರುವುದಾಗಿ ವರದಿಯಾಗಿದೆ. ಇದನ್ನು ತಪ್ಪು ಎಂದು ಕೆಲವರು ಹೀಯಾಳಿಸುತ್ತಿರುವುದು ಸರಿಯಲ್ಲ. ಮಕ್ಕಳು ಈ ರೀತಿ ಹಾದಿ ತಪ್ಪುವುದನ್ನು ತಾಯಿಯಾದವಳು ಹೇಗೆ ತಾನೇ ಸಹಿಸಿಯಾಳು? ಯಾವುದೇ ಶಿಕ್ಷಣ ಮಕ್ಕಳನ್ನು ಸರಿದಾರಿಗೆ ತರದೇ ಇದ್ದಾಗ ತಾಯಿಯೇ ಮಗನಿಗೆ ಶಿಕ್ಷೆ ಕೊಟ್ಟಿದ್ದಾಳೆ ಅಷ್ಟೆ.
ವಿದ್ಯೆ ಕಲಿಸದ ತಂದೆ, ಬುದ್ಧಿ ಹೇಳದ ಗುರು, ಬಿದ್ದಿರಲು ಬಂದು ನೋಡದ ತಾಯಿಯು ಶುದ್ಧ ವೈರಿಗಳು ಎಂಬುದು ಸರ್ವಜ್ಞನ ವಚನ. ಈ ಪ್ರಕರಣದಲ್ಲಿ ಹೆತ್ತ ತಾಯಿಯ ಸಂಕಟ ಅರ್ಥ ಮಾಡಿಕೊಳ್ಳಬೇಕಾಗಿದೆ. ತಾಯಿಯೇ ಮೊದಲ ಗುರು, ಮನೆಯೇ ಮೊದಲ ಪಾಠಶಾಲೆ ಎಂಬ ಮಾತು ಇಂತಹ ಸಂದರ್ಭಗಳಲ್ಲಿ ಮತ್ತೆ ಮತ್ತೆ ನೆನಪಾಗುತ್ತದೆ.
– ಎಂ.ಪರಮೇಶ್ವರ,ಮದ್ದಿಹಳ್ಳಿ, ಹಿರಿಯೂರು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.