ಕೋವಿಡ್ ರೋಗವು ಹಿರಿಯ ನಾಗರಿಕರಿಗೆ ಇತರರಿಗಿಂತ ಹೆಚ್ಚು ಸವಾಲನ್ನು ಒಡ್ಡಿರುವ ಕುರಿತು ಟಿ.ಎನ್.ವಾಸುದೇವಮೂರ್ತಿ ಅವರು ಬರೆದಿರುವ ಲೇಖನ (ಪ್ರ.ವಾ., ನ. 28) ಅರ್ಥಪೂರ್ಣವಾಗಿದೆ. ಹಿಂದೆ ಅವಿಭಕ್ತ ಕುಟುಂಬಗಳಲ್ಲಿ ಹಿರಿಯರ ಮಾರ್ಗದರ್ಶನದಡಿ ಬಾಳಿ–ಬದುಕಿದ ಪೀಳಿಗೆಯು ಉತ್ತಮ ಮೌಲ್ಯಗಳನ್ನು ಅಳವಡಿಸಿಕೊಂಡು ಜೀವನವನ್ನು ರೂಪಿಸಿಕೊಳ್ಳುತ್ತಿತ್ತು. ಆದರೆ ಇಂದು ವಿಘಟನೆಗೊಂಡಿರುವ ಕುಟುಂಬದ ಸದಸ್ಯರು ಹಿರಿಯರ ಮಾರ್ಗದರ್ಶನ ಇಲ್ಲದೆ, ಮಾನಸಿಕ ವೇದನೆಯಿಂದ ತೊಳಲಾಡಿ ಬದುಕನ್ನು ಜೀವಿತಾವಧಿಯ ಮಧ್ಯದಲ್ಲಿಯೇ ಕೊನೆಗೊಳಿಸಿಕೊಳ್ಳುತ್ತಿರುವ ನಿದರ್ಶನಗಳು ನಮ್ಮೆದುರಿಗೆ ಇವೆ.
ಹಿರಿಯ ಜೀವಿಗಳಿಗೆ ಆಶ್ರಯ ನೀಡದೆ, ಅವರನ್ನು ಬೀದಿಪಾಲು ಮಾಡಿರುವ ಎಷ್ಟೋ ಉದಾಹರಣೆಗಳಿವೆ. ಇಂತಹ ಸಂದಿಗ್ಧ ಕಾಲಘಟ್ಟದಲ್ಲಿ ಹಿರಿಯರಲ್ಲಿ ಕೊರೊನಾ ಸಹಜವಾಗಿಯೇ ಆತಂಕವನ್ನು ಹೆಚ್ಚಿಸಿದೆ. ವೃದ್ಧರ ಬಗ್ಗೆ ನಿಜವಾದ ಕಾಳಜಿ ತೋರಬೇಕಾದ ಅಗತ್ಯ ಹಿಂದಿಗಿಂತಲೂ ಇಂದು ಹೆಚ್ಚಾಗಿ ಕಂಡುಬರುತ್ತಿದೆ.
-ಡಾ. ಸಂಜೀವಕುಮಾರ ಅತಿವಾಳೆ, ಬೀದರ್
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.