ADVERTISEMENT

ಬೇಕಾಗಿದೆ ತರಬೇತಿ!

​ಪ್ರಜಾವಾಣಿ ವಾರ್ತೆ
Published 1 ಏಪ್ರಿಲ್ 2020, 19:30 IST
Last Updated 1 ಏಪ್ರಿಲ್ 2020, 19:30 IST

ಶಿವಮೊಗ್ಗದ ಪ್ರಮುಖ ಸ್ಥಳದಲ್ಲಿರುವ ನಂದಿನಿ ಹಾಲಿನ ಕೇಂದ್ರವೊಂದಕ್ಕೆ ಇತ್ತೀಚೆಗೆ ತೆರಳಿದಾಗ, ಒಂದು ಲೀಟರ್ ನೀಲಿ ಪ್ಯಾಕೆಟ್ ಖಾಲಿಯಾಗಿದೆ, ಅರ್ಧ ಲೀಟರ್ ಪ್ಯಾಕೆಟ್ ಮಾತ್ರ ಇದೆ ಎಂದರು. ಅರ್ಧ ಲೀಟರ್ ಪ್ಯಾಕೆಟ್‍ಗಳು ಪರಿಸರ ಮತ್ತು ಆರ್ಥಿಕ ದೃಷ್ಟಿಯಿಂದ ನಷ್ಟವನ್ನುಂಟು ಮಾಡುವ ಕಾರಣ ನಿರಾಕರಿಸಿದೆ. ನನ್ನ ಹಾಗೆಯೇ ಕೆಲವರು ಖರೀದಿಸಲಿಲ್ಲ. ಮಂಗಳೂರಿನಿಂದ ಸಂಬಂಧಿಯೊಬ್ಬರು ಕರೆ ಮಾಡಿ ಲೋಕಾಭಿರಾಮವಾಗಿ ಮಾತನಾಡುವಾಗ ‘ನಾವು ಎರಡು ಲೀಟರ್ ಹಾಲು ಕೇಳಿದರೆ ಒಂದೇ ಲೀಟರ್ ಕೊಡುತ್ತಾರೆ. ಹೆಚ್ಚಿಗೆ ಕೋರಿದರೆ, ಉಳಿದವರಿಗೂ ಬೇಕಲ್ಲ’ ಎನ್ನುತ್ತಾರೆ ಎಂಬ ಮಾಹಿತಿ ನೀಡಿದ್ದರು.

ಶಿಮುಲ್‍ನವರು ಕಳೆದ ಭಾನುವಾರ ಮತ್ತು ಸೋಮವಾರ ಉತ್ಪಾದಕರಿಂದ ಹಾಲು ಖರೀದಿಸಲಿಲ್ಲ. ಸೋಮವಾರ (ಮಾರ್ಚ್‌ 30) ಅದೇ ನಂದಿನಿ ಹಾಲಿನ ಕೇಂದ್ರಕ್ಕೆ ಸಂಜೆ 5 ಗಂಟೆಗೆ ಹೋಗಿ ಹಾಲು ಕೇಳಿದರೆ ‘ದಾಸ್ತಾನು ಖಾಲಿ’ ಎಂದು ಉತ್ತರಿಸಿದರು. ಶಿಮುಲ್‍ನ ವ್ಯವಸ್ಥಾಪಕ ನಿರ್ದೇಶಕರು, ಲಕ್ಷಾಂತರ ಲೀಟರ್ ಹಾಲು ಶೇಖರಣೆಯಾಗಿದ್ದು, ವ್ಯರ್ಥವಾಗುವ ಕಾರಣ ಭಾನುವಾರ ಮತ್ತು ಸೋಮವಾರ ಉತ್ಪಾದಕರಿಂದ ಹಾಲು ಖರೀದಿಸುವುದಿಲ್ಲ ಎಂದು ಪತ್ರಿಕಾ ಪ್ರಕಟಣೆ ಕೊಟ್ಟಿದ್ದರು. ಮಾರುಕಟ್ಟೆಯಿದ್ದೂ ಅದನ್ನು ಸದ್ಬಳಕೆ ಮಾಡದ ಇಂಥ ಅಸಡ್ಡೆಯ ನಿರ್ಧಾರಗಳಿಗೆ ಯಾರು ಹೊಣೆ?

ಇತ್ತ ಗ್ರಾಹಕರು ಹಾಲಿನ ಅಭಾವವಿದೆ ಎಂದುಕೊಂಡರು. ಅತ್ತ ಉತ್ಪಾದಕರು ಲಕ್ಷಾಂತರ ಲೀಟರ್ ಹಾಲನ್ನು ಬಳಸಲೂ ಆಗದೆ ಒಕ್ಕೂಟಕ್ಕೆ ಮಾರಲೂ ಆಗದೆ ನಷ್ಟ ಅನುಭವಿಸಬೇಕಾಯಿತು. ಮಾರುಕಟ್ಟೆಯ ಏರಿಳಿತ, ಸರಬರಾಜು, ದಾಸ್ತಾನು ಇತ್ಯಾದಿಗಳ ಬಗ್ಗೆ ಕೆಎಂಎಫ್ ಅಧಿಕಾರಿಗಳಿಗೆ ಕೂಡಲೇ ತರಬೇತಿ ನೀಡಬೇಕು. ಅನಗತ್ಯವಾದ ಇಂಥ ಸಮಸ್ಯೆಗಳಿಂದ ಗ್ರಾಹಕರು ಮತ್ತು ಉತ್ಪಾದಕರನ್ನು ಪಾರು ಮಾಡಬೇಕು.

ADVERTISEMENT

-ಡಾ. ಚೆನ್ನು ಅ. ಹಿರೇಮಠ, ರಾಣೆಬೆನ್ನೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.