ದಿನಗಳೆದಂತೆ ಕೊರೊನಾ ಸೋಂಕು ವ್ಯಾಪಕವಾಗುತ್ತಿರುವುದರಿಂದ ರಾಜ್ಯದಲ್ಲಿ ಮತ್ತೊಮ್ಮೆ ಲಾಕ್ಡೌನ್ ಹೇರಬೇಕೆಂದು ಕೆಲವರು ಸರ್ಕಾರಕ್ಕೆ ಮನವಿ ಮಾಡುತ್ತಿದ್ದಾರೆ. ಇದು ಸರಿಯಲ್ಲ. ಕೊರೊನಾ ವೈರಸ್ ಕಾಣಿಸಿಕೊಂಡ ಆರಂಭದ ದಿನಗಳಲ್ಲಿಯೇ ಸರ್ಕಾರವು ಇಡೀ ದೇಶವನ್ನು ಲಾಕ್ಡೌನ್ ಮಾಡಿತು. ಪರಿಸ್ಥಿತಿಯ ತೀವ್ರತೆಯನ್ನು ಅರಿಯದೆ ಎಷ್ಟೋ ಜನ ಬೇಜವಾಬ್ದಾರಿಯಿಂದ ಹಟಕ್ಕೆ ಬಿದ್ದವರಂತೆ ಹೊರಗೆ ತಿರುಗಾಡಿದರು. ಆಗ ಸರ್ಕಾರ ಮತ್ತು ಪೊಲೀಸರು ಎಷ್ಟೇ ಮನವಿ ಮಾಡಿದರೂ ಅದಕ್ಕೆ ಸೊಪ್ಪು ಹಾಕದೆ ಮನಬಂದಂತೆ ನಡೆದುಕೊಂಡರು.
ಈಗ ಪ್ರಕರಣಗಳು ಹೆಚ್ಚುತ್ತಿರುವುದರಿಂದ, ಜೀವಕ್ಕೆ ಹೆದರಿ ಲಾಕ್ಡೌನ್ ಮಾಡುವಂತೆ ಗೋಗರೆಯುತ್ತಿದ್ದಾರೆ. ಕೋವಿಡ್ಗೆ ಇನ್ನೂ ಔಷಧಿ ಕಂಡುಹಿಡಿಯದೇ ಇರುವುದರಿಂದ ಮುಂದಿನ ದಿನಗಳಲ್ಲಿ ಪ್ರಕರಣಗಳು ಹೆಚ್ಚಾಗುತ್ತಲೇ ಹೋಗುತ್ತವೆ. ಹಾಗೆಂದು ಅಲ್ಲಿಯವರೆಗೂ ಲಾಕ್ಡೌನ್ ಘೋಷಣೆಯೊಂದೇ ಪರಿಹಾರವಲ್ಲ. ಅದರ ಬದಲು ಜನರೇ ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡು, ಅಗತ್ಯವಿದ್ದಾಗ ಮಾತ್ರ ಹೊರಗೆ ಬಂದು, ತಮ್ಮ ಜೀವದ ಬಗ್ಗೆ ಸ್ವತಃ ಕಾಳಜಿ ವಹಿಸುವುದು ಒಳ್ಳೆಯದು.
-ಮಣಿಕಂಠ ಪಾ. ಹಿರೇಮಠ, ಬಾಗಲಕೋಟೆ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.