ADVERTISEMENT

ರಕ್ತದ ಲೆಕ್ಕವಿದೆ

​ಪ್ರಜಾವಾಣಿ ವಾರ್ತೆ
Published 23 ಅಕ್ಟೋಬರ್ 2018, 20:01 IST
Last Updated 23 ಅಕ್ಟೋಬರ್ 2018, 20:01 IST

ಹಳೆಯ ಪಿಂಚಣಿ ವ್ಯವಸ್ಥೆಯನ್ನು ಮತ್ತೆ ಜಾರಿ ಮಾಡುವಂತೆ ಸರ್ಕಾರವನ್ನು ಒತ್ತಾಯಿಸಲು ಕರ್ನಾಟಕ ರಾಜ್ಯ ಸರ್ಕಾರಿ ಎನ್‌ಪಿಎಸ್‌ ನೌಕರರ ಸಂಘದ ನೇತೃತ್ವದಲ್ಲಿ ನಡೆದ ‘ರಕ್ತ ಕೊಟ್ಟೇವು ಪಿಂಚಣಿ ಬಿಡೆವು’ ಅಭಿಯಾನದಲ್ಲಿ ಸಂಗ್ರಹವಾದ ರಕ್ತದ ಲೆಕ್ಕ ಎಲ್ಲಿದೆ, ಅದರ ಸದ್ಬಳಕೆಗೆ ಯಾವ ಕ್ರಮ ಕೈಗೊಳ್ಳಲಾಗಿದೆ ಎಂದು ಮಾಣಿಕ್‌ ಆರ್‌. ಭುರೆ ಪ್ರಶ್ನೆ ಎತ್ತಿದ್ದಾರೆ (ಸಂಗತ, ಪ್ರ.ವಾ., ಅ. 3). ಸಂಘದ ಅಧ್ಯಕ್ಷನಾಗಿ ಈ ಬಗ್ಗೆ ಸ್ಪಷ್ಟನೆ ನೀಡಬೇಕಾಗಿದೆ.

ಅಭಿಯಾನದ ಅಂಗವಾಗಿ ಸಂಘದ ನೇತೃತ್ವದಲ್ಲಿ ರಾಜ್ಯದಾದ್ಯಂತ 164 ಕೇಂದ್ರಗಳಲ್ಲಿ ಒಟ್ಟಾರೆ 20,254 ಯೂನಿಟ್‌ ರಕ್ತವನ್ನು ಸಂಗ್ರಹಿಸಲಾಗಿದೆ. ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ವಿಕ್ಟೋರಿಯಾ ರಕ್ತನಿಧಿ, ಲಯನ್ಸ್‌ ಎಲೈಟ್‌, ರೋಟರಿ ರಕ್ತನಿಧಿಗಳ ಸಹಯೋಗದಲ್ಲಿ ರಕ್ತವನ್ನು ಸಂಗ್ರಹಿಸಲಾಗಿತ್ತು. ಇದರಲ್ಲಿ ಬಹುಭಾಗವನ್ನು ಕಿದ್ವಾಯಿ ಸ್ಮಾರಕ ಕ್ಯಾನ್ಸರ್‌ ಆಸ್ಪತ್ರೆಗೆ ಹಸ್ತಾಂತರಿಸಲಾಗಿದೆ. ಇತರ ಕೇಂದ್ರಗಳಲ್ಲೂ ಇಂಥ ವ್ಯವಸ್ಥೆಯನ್ನು ಮಾಡಿ, ಒಂದು ಯೂನಿಟ್‌ ರಕ್ತವೂ ‍ಪೋಲಾಗದಂತೆ ಮತ್ತು ಸರ್ಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುವವರಿಗೆ ಉಚಿತವಾಗಿ ಲಭ್ಯವಾಗುವಂತೆ ಎಚ್ಚರ ವಹಿಸಲಾಗಿದೆ.

ರಕ್ತದಾನದ ಬಗ್ಗೆ ಆಡಳಿತದ ಗಮನ ಸೆಳೆಯುವ ಕೆಲಸವನ್ನೂ ಸಂಘ ಮಾಡಿದೆ. ಈ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿಯನ್ನು ಆಹ್ವಾನಿಸಲಾಗಿತ್ತು. ಇದಾದ ಬಳಿಕವೂ, ಅ. 9ರಂದು ಮುಖ್ಯಮಂತ್ರಿ ಕುಮಾರಸ್ವಾಮಿ ಅವರನ್ನು ಅವರ ಗೃಹ ಕಚೇರಿಯಲ್ಲಿ ಭೇಟಿ ಮಾಡಿ ರಕ್ತದಾನದ ಮಾಹಿತಿ ನೀಡುವುದರ ಜೊತೆಗೆ ನಮ್ಮ ಬೇಡಿಕೆ ಈಡೇರಿಸುವಂತೆ ಪುನಃ ಒತ್ತಾಯಿಸಲಾಗಿದೆ.

ADVERTISEMENT

–ಶಾಂತಾರಾಮ, ಅಧ್ಯಕ್ಷ, ಕರ್ನಾಟಕ ರಾಜ್ಯ ಸರ್ಕಾರಿ ಎನ್‌ಪಿಎಸ್‌ ನೌಕರರ ಸಂಘ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.