ಜಿಲ್ಲಾ ಪಂಚಾಯಿತಿ ಹಾಗೂ ತಾಲ್ಲೂಕು ಪಂಚಾಯಿತಿ ಚುನಾವಣೆಗಳನ್ನು ನಡೆಸುವಲ್ಲಿ ವಿಳಂಬ ಧೋರಣೆ ಅನುಸರಿಸುತ್ತಿರುವ ರಾಜ್ಯ ಸರ್ಕಾರಕ್ಕೆ ಸಾಂವಿಧಾನಿಕ ಹೊಣೆಗಾರಿಕೆ ನಿಭಾಯಿಸುವ ಬದ್ಧತೆ ಇದ್ದಂತಿಲ್ಲ ಎಂದು ಅತೃಪ್ತಿ ವ್ಯಕ್ತಪಡಿಸಿ, ₹ 5 ಲಕ್ಷ ದಂಡ ವಿಧಿಸಿರುವ ಹೈಕೋರ್ಟ್ ಕ್ರಮ ಒಪ್ಪುವಂಥದ್ದು. ಆದರೆ, ಸರ್ಕಾರವು ದಂಡ ಪಾವತಿಸುವುದು ಜನರ ತೆರಿಗೆ ಹಣದಿಂದಲೇ ಆಗಿರುವುದರಿಂದ, ಆಡಳಿತಾರೂಢರ ನಿರ್ಲಕ್ಷ್ಯಕ್ಕೆ ಜನರು ಪರೋಕ್ಷವಾಗಿ ದಂಡ ಪಾವತಿಸಿದಂತೆ ಆಗುವುದಿಲ್ಲವೇ? ಬದಲಾಗಿ, ಚುನಾವಣೆ ವಿಳಂಬಕ್ಕೆ ಕಾರಣರಾಗಿರುವ ಅಧಿಕಾರಿಗಳು ಅಥವಾ ಜನಪ್ರತಿನಿಧಿಗಳಿಂದ ದಂಡ ವಸೂಲಿ ಮಾಡಿದರೆ, ಮುಂದಿನ ದಿನಗಳಲ್ಲಿ ಸಮಯಕ್ಕೆ ಸರಿಯಾಗಿ ಚುನಾವಣೆಗಳನ್ನು ನಡೆಸಲು ಸರ್ಕಾರ ಎಚ್ಚರ ವಹಿಸುತ್ತದೆ. ಮಿಗಿಲಾಗಿ, ಸರ್ಕಾರದ ಕರ್ತವ್ಯಗಳನ್ನು ಕಾರ್ಯರೂಪಕ್ಕೆ ತರುವಾಗ ವ್ಯವಸ್ಥಿತ ಯೋಜನೆ ಮತ್ತು ಮುಂದಾಲೋಚನೆ ಕ್ರಮಗಳು ಕೂಡ ಬಲಗೊಳ್ಳುತ್ತವೆ.
- ಡಾ. ಜಿ.ಬೈರೇಗೌಡ,ಬೆಂಗಳೂರು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.