ADVERTISEMENT

ದೈಹಿಕ ಶಿಕ್ಷಣ: ತಪ್ಪುಗ್ರಹಿಕೆ ಸಲ್ಲದು

​ಪ್ರಜಾವಾಣಿ ವಾರ್ತೆ
Published 9 ಡಿಸೆಂಬರ್ 2019, 20:15 IST
Last Updated 9 ಡಿಸೆಂಬರ್ 2019, 20:15 IST

ವಿದೇಶಗಳಲ್ಲಿ ಮಕ್ಕಳನ್ನು ಶಾಲೆಗೆ ಬರುವಂತೆ ಆಕರ್ಷಿಸಲು ದೈಹಿಕ ಶಿಕ್ಷಣವನ್ನು ಪ್ರಾಥಮಿಕ ಹಂತದಿಂದ ಕಡ್ಡಾಯಗೊಳಿಸಿ ಮಕ್ಕಳ ಹಾಜರಾತಿ ಹೆಚ್ಚಿಸಿಕೊಳ್ಳುತ್ತಾರೆ. ಆದರೆ, ನಮ್ಮ ದೇಶದಲ್ಲಿ ಪ್ರಾಥಮಿಕ ಶಾಲೆಗಳಲ್ಲಿ ದೈಹಿಕ ಶಿಕ್ಷಣದ ಅವಧಿಯ ಸೂಕ್ತ ಬಳಕೆ ಆಗುತ್ತಿಲ್ಲ. ಕಿರಿಯ ಪ್ರಾಥಮಿಕ ಶಾಲೆಗಳಲ್ಲಿ ದೈಹಿಕ ಶಿಕ್ಷಣಕ್ಕೆ ಆದ್ಯತೆ ನೀಡಲು ಅನುಸರಿಸಬೇಕಾದ ಕ್ರಮಗಳ ಕುರಿತು ಪ್ರೊ. ಎಲ್.ಆರ್.ವೈದ್ಯನಾಥನ್ ಸಮಿತಿ ನಾನಾ ಸಲಹೆಗಳನ್ನು ನೀಡಿತ್ತು. ಆದರೆ ಅವು ಸಮರ್ಪಕವಾಗಿ ಅನುಷ್ಠಾನಕ್ಕೆ ಬಂದಿಲ್ಲ.

ಎಲ್ಲ ಮಕ್ಕಳನ್ನು ಒಟ್ಟಿಗೇ ಹೊರಗೆ ಬಿಟ್ಟಾಗ, ಕೆಲವು ಅನಾಹುತಗಳಾಗಿ ಪೋಷಕರ ಕಡೆಯಿಂದ ಕಿರಿಕಿರಿ ಅನುಭವಿಸಿದ ಶಿಕ್ಷಕರು, ಆಟದ ಅವಧಿಯೆಂದರೆ ಅದೊಂದು ಕೆಟ್ಟ ಅವಧಿ ಎಂದು ಭಾವಿಸಿರುವ ಸಾಧ್ಯತೆಯೇ ಹೆಚ್ಚು. ಇಂತಹ ಕೆಲವು ಕಹಿ ಘಟನೆಗಳಿಂದ ಕೈಸುಟ್ಟುಕೊಂಡ ಶಿಕ್ಷಕರು, ಮುಂದೆ ಅಧಿಕಾರಿಗಳಾಗಿ ಬಂದಾಗ ದೈಹಿಕ ಶಿಕ್ಷಣಕ್ಕೆ ಸಂಬಂಧಿಸಿದಂತೆ ಎಂತಹ ಮನಃಸ್ಥಿತಿ ಹೊಂದಿರಬಹುದು ಎಂಬುದನ್ನು ಊಹಿಸಬಹುದು. ಈ ಕಾರಣಕ್ಕೇ, ದೈಹಿಕ ಶಿಕ್ಷಣವನ್ನು ಶಾಸ್ತ್ರೀಯವಾಗಿ ತರಗತಿವಾರು ಬೋಧಿಸಬೇಕೆಂದು ಒತ್ತಾಯಿಸಿ ಹತ್ತು ವರ್ಷಗಳಿಂದ ಹೋರಾಟ ನಡೆಯುತ್ತಿದ್ದರೂ ಅಂತಹ ಅಧಿಕಾರಿಗಳು, ತಜ್ಞರು ಎನಿಸಿಕೊಂಡವರಿಗೆ ಕಿವಿಯೇ ಕೇಳಿಸದಂತಾಗಿದೆ.

ಶಾಲೆಗಳಲ್ಲಿ ಮಕ್ಕಳಿಗೆ ದೈಹಿಕ ಶಿಕ್ಷಣ ಸರಿಯಾದ ರೀತಿಯಲ್ಲಿ ಆದರೆ, ಅಕ್ಷರ ಸಂಸ್ಕೃತಿಯಿಂದಲೂ ಅವರು ದೂರವಾಗುವುದಿಲ್ಲ. ಇನ್ನು ಮುಂದಾದರೂ ಶಿಕ್ಷಣ ಇಲಾಖೆಯು ದೈಹಿಕ ಶಿಕ್ಷಣದಲ್ಲಿ ಮಕ್ಕಳು ಭಾಗವಹಿಸಲು ಸೂಕ್ತ ವಾತಾವರಣ ಕಲ್ಪಿಸುವ ಮನಸ್ಸು ಮಾಡಲಿ.

ADVERTISEMENT

ಜಿ. ಪಳನಿಸ್ವಾಮಿ ಜಾಗೇರಿ, ಕೊಳ್ಳೇಗಾಲ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.