ADVERTISEMENT

ಶುಕ್ರವಾರ, 8–4–1994

​ಪ್ರಜಾವಾಣಿ ವಾರ್ತೆ
Published 7 ಏಪ್ರಿಲ್ 2019, 20:23 IST
Last Updated 7 ಏಪ್ರಿಲ್ 2019, 20:23 IST

ಭಾರತದ ಜತೆ ಚರ್ಚೆ: ಟಾಲ್ಬೋಟ್ ತೃಪ್ತಿ

ನವದೆಹಲಿ, ಏ. 7 (ಪಿಟಿಐ)– ದಕ್ಷಿಣ ಏಷ್ಯಾದಲ್ಲಿ ಅಣ್ವಸ್ತ್ರ ಪ್ರಸರಣ ನಿಷೇಧವೂ ಸೇರಿದಂತೆ ಹಲವಾರು ವಿಷಯಗಳ ಬಗ್ಗೆ ತಾವು ಭಾರತದ ಜತೆ ಚರ್ಚೆ ನಡೆಸಿದ್ದು, ಮಾತುಕತೆ ಆಶಾದಾಯಕವಾಗಿದೆ ಎಂದು ಭಾರತಕ್ಕೆ ಮೂರು ದಿನಗಳ ಭೇಟಿ ನೀಡಿರುವ ಅಮೆರಿಕದ ವಿದೇಶಾಂಗ ಖಾತೆ ಉಪ ಕಾರ್ಯದರ್ಶಿ ಸ್ಟ್ರೋಬ್ ಟಾಲ್ಬೋಟ್ ಇಂದು ಇಲ್ಲಿ ತಿಳಿಸಿದರು.

ಅವರು ವಿದೇಶಾಂಗ ಕಾರ್ಯದರ್ಶಿ ಕೆ. ಶ್ರೀನಿವಾಸನ್ ಅವರ ಜತೆ ಇಂದು ಚರ್ಚೆ ನಡೆಸಿದ ನಂತರ ಸುದ್ದಿಗಾರರ ಜತೆ ಮಾತನಾಡುತ್ತಿದ್ದರು.

ADVERTISEMENT

ದಕ್ಷಿಣ ಏಷ್ಯಾದಲ್ಲಿ ಅಣ್ವಸ್ತ್ರ ಪ್ರಸರಣ ಕುರಿತ ಒಪ್ಪಂದ ಜಾರಿಗೆ ಅಮೆರಿಕ ಕೈಗೊಳ್ಳುವ ಕ್ರಮಗಳ ಬಗ್ಗೆ ಅವರು ಖಚಿತ ಉತ್ತರ ಕೊಡಲು ನಿರಾಕರಿಸಿದರು.

ಗೋವಾ: ಡಿ’ಸೋಜ ಮತ್ತೆ ಮುಖ್ಯಮಂತ್ರಿ

ನವದೆಹಲಿ, ಏ. 7 (ಪಿಟಿಐ)– ಕುತೂಹಲ ಕೆರಳಿಸಿದ ಆರು ದಿನಗಳ ‘ರಾಜಕೀಯ ನಾಟಕ’ದ ನಂತರ ಡಾ. ವಿಲ್ಫ್ರೆಡ್ ಡಿಸೋಜ ಅವರು ಗೋವಾದ ಮುಖ್ಯಮಂತ್ರಿಯಾಗಿ ನಾಳೆ ಮತ್ತೆ ಅಧಿಕಾರ ಸ್ವೀಕರಿಸಲಿದ್ದಾರೆ.

ಡಿಸೋಜ ಅವರ ಜೊತೆಗೆ ಅವರ ಹಿಂದಿನ ಸಂಪುಟದಲ್ಲಿದ್ದ ಐವರು ಸಚಿವರೂ ನಾಳೆ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಸಂಪುಟಕ್ಕೆ ರಾಜೀನಾಮೆ ನೀಡಿದ್ದ ಉಳಿದ ಐವರು ಸಚಿವರ
ಭವಿಷ್ಯದ ಬಗ್ಗೆ ಪಕ್ಷದ ಅಧ್ಯಕ್ಷ ಪಿ.ವಿ. ನರಸಿಂಹರಾವ್ ಅವರು ನಿರ್ಧಾರ
ಕೈಗೊಳ್ಳಲಿದ್ದಾರೆ ಎಂದು ಕಾಂಗೈ ಪ್ರಧಾನ ಕಾರ್ಯದರ್ಶಿ ಜನಾರ್ದನ ಪೂಜಾರಿ ಅವರು ಇಂದು ಇಲ್ಲಿ
ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.