ಆದಾಯಕ್ಕಿಂತ ಹೆಚ್ಚಿನ ಆಸ್ತಿ ಗಳಿಸಿದ ಸರ್ಕಾರಿ ಅಧಿಕಾರಿಗಳ ಮನೆ ಮತ್ತು ಅವರ ಕುಟುಂಬಸ್ಥರ ಮನೆಗಳ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸುವುದು ಮಾಮೂಲಿನ ಸಂಗತಿ. ಆದರೆ, ಕಾನೂನಿನ ಕುಣಿಕೆಯಿಂದ ನುಸುಳಿಕೊಂಡು ಬರುವುದರಲ್ಲಿ ಅಧಿಕಾರಿಗಳು ಸಿದ್ಧಹಸ್ತರು. ಹಾಗಾಗಿಯೇ, ಹೆಚ್ಚಿನ ಸಂಖ್ಯೆಯ ಅಧಿಕಾರಿಗಳು ಶಿಕ್ಷೆಯಿಂದ ತಪ್ಪಿಸಿಕೊಳ್ಳುತ್ತಾರೆ. ಸರ್ಕಾರವು ವೇತನ ಆಯೋಗದ ಮೂಲಕ ಕಾಲಕಾಲಕ್ಕೆ ಅಧಿಕಾರಿಗಳಿಗೆ ಸಂಬಳ ಹೆಚ್ಚಿಸುತ್ತದೆ. ಹೀಗಿದ್ದರೂ ಜನರಿಂದ ಹಣ ಕೀಳುವುದು ಹೇಸಿಗೆ ಪಡುವಂತದ್ದು. ಜನಸಾಮಾನ್ಯರಿಗೆ ಅಧಿಕಾರಿಗಳ ಮೇಲೆ ನಂಬಿಕೆ ಇಲ್ಲದಂತಾಗಿದೆ. ಭ್ರಷ್ಟಾಚಾರ ತಡೆಗೆ ಈಗಿರುವ ಕಾನೂನನ್ನು ಮತ್ತಷ್ಟು ಬಿಗಿಗೊಳಿಸಬೇಕಿದೆ.
⇒ಪ್ರಜ್ವಲ ಜಿ.ಟಿ., ಕಲಬುರಗಿ
ಡಿಸೆಂಬರ್ ಅಂತ್ಯದೊಳಗೆ ಎಸ್ಎಸ್ಎಲ್ಸಿ ಪಠ್ಯಕ್ರಮದ ಬೋಧನೆ ಪೂರ್ಣಗೊಳಿಸಲು ಶಿಕ್ಷಕರಿಗೆ ಸೂಚಿಸಲಾಗಿದೆ. ಈ ನಡುವೆ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯಿಂದ ಡಿಸೆಂಬರ್ನಲ್ಲಿ ಸರ್ಕಾರಿ ಪ್ರೌಢಶಾಲೆಗಳಲ್ಲಿನ ಮೂರ್ನಾಲ್ಕು ಶಿಕ್ಷಕರನ್ನು ವಿವಿಧ ವಿಷಯ ಕುರಿತು ಆರು ದಿನಗಳ ತರಬೇತಿಗೆ ನಿಯೋಜಿಸಲಾಗಿದೆ. ಹೀಗಾದರೆ ನಿಗದಿತ ಅವಧಿಯೊಳಗೆ ಪಠ್ಯಕ್ರಮ ಪೂರ್ಣಗೊಳಿಸಲು ಸಾಧ್ಯವೆ? ಬೋಧನಾ ಅವಧಿ ಹೊರತುಪಡಿಸಿ ಬೇರೆ ಅವಧಿಯಲ್ಲಿ ತರಬೇತಿ ನೀಡುವುದು ಸೂಕ್ತ. ಶಿಕ್ಷಣ ಸಚಿವರು ಈ ಬಗ್ಗೆ ಗಮನಹರಿಸಲಿ.
⇒ಸಮರ್ಥಗೌಡ ಕೌಲೇರ್, ಶಿವಮೊಗ್ಗ
ಜಾತ್ಯತೀತ ದೇಶದಲ್ಲಿ, ಕಾವಿಧಾರಿಗಳು ಸರ್ವಸಂಗ ಪರಿತ್ಯಾಗಿಗಳೆನಿಸದೆ, ತಮ್ಮ ಜಾತಿಗಷ್ಟೇ ಸೀಮಿತವಾಗಿ ಜಪ, ತಪ, ಧ್ಯಾನ, ಪೂಜೆ ಪುನಸ್ಕಾರಗಳಿಗೆಲ್ಲ ತಿಲಾಂಜಲಿಯಿತ್ತು ಖಾದಿಗಳ ಹಿಂದೆ ಬಿದ್ದಿರುವುದು ದುರದೃಷ್ಟಕರ. ಸರ್ಕಾರ ಕೊಡುವ ಅನುದಾನದಿಂದ ಮಠಗಳನ್ನು ನಡೆಸುತ್ತಾ, ಖಾದಿಗಳ ಋಣ ತೀರಿಸಲೋಸುಗವೇ ತಮ್ಮ ಜಾತಿಗಳ ರಾಜಕಾರಣಿಗಳನ್ನೇ ಅಧಿಕಾರಕ್ಕೆ ತರಲು ಹಪಹಪಿಸುವುದು ಅಸಹ್ಯ ಹುಟ್ಟಿಸುವಂತಿದೆ. ರಾಜಕೀಯದ ಗೊಡವೆ ಕಾವಿಗಳಿಗೇಕೆ? ಇವರು ಎಂದಾದರೂ ಜನಸಾಮಾನ್ಯರ ಕಷ್ಟಕಾರ್ಪಣ್ಯಗಳ ಬಗ್ಗೆ ಮಾತನಾಡಿದ್ದಾರಾ? ರೈತರ ಬವಣೆಗಳಿಗೆ ದನಿ ಎತ್ತಿದ್ದಾರಾ? ನಿರುದ್ಯೋಗಿ ಯುವಕರ ನೆರವಿಗೆ ನಿಂತ ಉದಾಹರಣೆ ಇದೆಯಾ? ತಮ್ಮನ್ನು ಭಕ್ತರು ಪೀಠದ ಮೇಲೆ ಕೂರಿಸಿರುವುದು ಏಕೆ ಎಂಬುದನ್ನು ಅರಿತುಕೊಂಡು ವರ್ತಿಸಲಿ.
⇒ಬಿ.ಎಲ್. ವೇಣು, ಚಿತ್ರದುರ್ಗ
ರಾಜ್ಯದಲ್ಲಿ ಮುಖ್ಯಮಂತ್ರಿ ಕುರ್ಚಿ ಖಾಲಿ ಇಲ್ಲ. ಹೀಗಿದ್ದರೂ ಕೆಲವು ಶಾಸಕರು, ಸಚಿವರು ಮತ್ತು ಬೆಂಬಲಿಗರು ಮತದಾರರಲ್ಲಿ ಅನಗತ್ಯ ಗೊಂದಲ ಸೃಷ್ಟಿಸುತ್ತಿದ್ದಾರೆ. ಈ ಗುಂಪುಗಳು ಜಾತಿಗಳ ನಡುವೆ ಬಿರುಕು ಮೂಡಿಸುತ್ತಿವೆ. ಜನಸೇವೆ ಮರೆತು ಕುರ್ಚಿ ರಾಜಕೀಯ ಮಾಡುತ್ತಿರುವವರ ಕಿವಿ ಹಿಂಡಬೇಕಿರುವ ಕಾಂಗ್ರೆಸ್ನ ಹೈಕಮಾಂಡ್ ಬಾಲ ಸುಟ್ಟಿರುವ ಬೆಕ್ಕಿನಂತೆ ಕಾಣಿಸುತ್ತಿದೆ.
⇒ಕಾರ್ತಿಕ್ ಚಿ.ಸಂ., ಬೆಂಗಳೂರು
ಹಾಸ್ಯ ಕಲಾವಿದ, ಹಿರಿಯ ಪೋಷಕ ನಟ ಉಮೇಶ್ ಅವರ ನಿಧನವು ಕನ್ನಡ ಚಿತ್ರರಂಗಕ್ಕೆ ತುಂಬಲಾರದ ನಷ್ಟ. 60ರ ದಶಕದಲ್ಲಿ ‘ಮಕ್ಕಳ ರಾಜ್ಯ’ ಸಿನಿಮಾ ಮೂಲಕ ಬಾಲನಟನಾಗಿ ಚಿತ್ರರಂಗ ಪ್ರವೇಶಿಸಿದ ಅವರು, ವರನಟ ರಾಜ್ಕುಮಾರ್, ವಿಷ್ಣುವರ್ಧನ್ ಸೇರಿದಂತೆ ಹಲವು ದಿಗ್ಗಜರೊಂದಿಗೆ ತೆರೆಹಂಚಿಕೊಂಡಿದ್ದರು.
ಅದರಲ್ಲೂ ರಾಜ್ಕುಮಾರ್ ಅವರೊಂದಿಗೆ ‘ಬಬ್ರುವಾಹನ’ ಸೇರಿದಂತೆ ಹಲವು ಸದಭಿರುಚಿಯ ಸಿನಿಮಾಗಳಲ್ಲಿನ ಅವರ ಮನೋಜ್ಞ ಅಭಿನಯ ಪ್ರೇಕ್ಷಕರನ್ನು ಮೋಡಿ ಮಾಡಿದೆ. ‘ಅಪಾರ್ಥ ಮಾಡ್ಕೋಬೇಡಿ...’ ಎಂಬ ಅವರ ಡೈಲಾಗ್ನಿಂದ ಕನ್ನಡ ಪ್ರೇಕ್ಷಕರು ನಕ್ಕುನಲಿದಿದ್ದಾರೆ. ಚಂದನವನಕ್ಕೆ ಅವರು ಸಲ್ಲಿಸಿರುವ ಕಲಾಸೇವೆ ಅಜರಾಮರ.
⇒ದರ್ಶನ್, ತುಮಕೂರು
ರಾಜ್ಯ ಸರ್ಕಾರದ ನಾಯಕತ್ವ ಬದಲಾವಣೆ ಗೊಂದಲದ ಗೂಡಾಗಿದೆ. ಶಾಸಕರು ಆಡಳಿತ ಯಂತ್ರವನ್ನು ನಿಷ್ಕ್ರಿಯಗೊಳಿಸಿ, ಅಭಿವೃದ್ಧಿ ಕಾರ್ಯಗಳನ್ನು ಬದಿಗೊತ್ತಿ ತಮ್ಮ ಬೆಂಬಲಿತ ನಾಯಕನ ಪರವಾಗಿ ರಾತ್ರೋರಾತ್ರಿ ದೆಹಲಿಗೆ ಹಾರಿ ಹೈಕಮಾಂಡ್ ಅಂಗಳದಲ್ಲಿಯೇ ಮೊಕ್ಕಾಂ ಹೂಡಿದ್ದು ಆಯಿತು. ಆದರೆ, ಈ ಶಾಸಕರು ಕ್ಷೇತ್ರದಲ್ಲಿ ಕುಂಠಿತಗೊಂಡ ಅಭಿವೃದ್ಧಿ ಕಾರ್ಯಗಳನ್ನು ಗಮನಿಸಿರುವುದು ಮತ್ತು ಸಾರ್ವಜನಿಕರ ಸಮಸ್ಯೆ ಆಲಿಸಿರುವುದು ಉಂಟೇ? ರೈತರ ಬೇಡಿಕೆಗಳನ್ನು ಅಧಿವೇಶನಗಳಲ್ಲಿ ಚರ್ಚಿಸಿದ್ದು ನೆನಪಿದೆಯೇ? ಕ್ಷೇತ್ರದ ಜನರ ಕಷ್ಟಕಾರ್ಪಣ್ಯ ಕುರಿತು ಧ್ವನಿ ಎತ್ತುವುದರಲ್ಲಿ ನಿರುತ್ಸಾಹ ತೋರುತ್ತಾರೆ.
ಸಂವಿಧಾನದ ಆಶಯ ಹೊತ್ತು ರಾಜಕೀಯ ಕ್ಷೇತ್ರಕ್ಕೆ ಪ್ರವೇಶ ಮಾಡಿರುವುದನ್ನು ಜನಪ್ರತಿನಿಧಿಗಳು ಮರೆಯಬಾರದು. ಹೈಕಮಾಂಡ್ ಅಥವಾ ಮಠಾಧೀಶರನ್ನು ನೋಡಿ ಜನ ನಿಮ್ಮನ್ನು ಆಯ್ಕೆ ಮಾಡಿರುವುದಿಲ್ಲ. ಇದರ ಅರಿವು ಜನಪ್ರತಿನಿಧಿಗಳಿಗೆ ಇರಲಿ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರಜಾಪ್ರತಿನಿಧಿಗಳು ಉತ್ತರದಾಯಿ ಆಗಬೇಕಾಗಿರುವುದು ಪ್ರಜೆಗಳಿಗೇ ಹೊರತು ತಮ್ಮ ಸಮುದಾಯ
ಗಳ ಮಠಾಧೀಶರಿಗಲ್ಲ.
⇒ಮಲ್ಲಿಕಾರ್ಜುನ್, ಬೆಂಗಳೂರು
ಅಧಿಕಾರ ಗದ್ದುಗೆ
ಏರಲು ಬಳಸಬೇಡಿ
ಜಾತಿ ಹೆಸರಿನ ಆಶ್ರಯ.
ಎಲ್ಲ ವರ್ಗದ
ಸಮಾನತೆ ಮತ್ತು ಹಿತ,
ಅದುವೇ ಅಲ್ಲವೇ
ಪ್ರಜಾಪ್ರಭುತ್ವದ
ನಿಜ ಆಶಯ!
ಆರ್. ಸುನೀಲ್, ತರೀಕೆರೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.