ಭಾರತ– ಪಾಕಿಸ್ತಾನದ ನಡುವೆಗಡಿಯೊಂದೇ ಸಮಸ್ಯೆ ಅಲ್ಲ; ಇಲ್ಲಿ ಧರ್ಮವೂ ಸೇರಿಕೊಂಡಿದೆ.ಕಾಶ್ಮೀರದ ನೆಪದಲ್ಲಿ ಅಲ್ಲಿನ ಧರ್ಮಾಂಧರು ಭಾರತದ ವಿರುದ್ಧ ವಿಘಟನಕಾರಿ ಕೃತ್ಯಗಳನ್ನು ಎಸಗುತ್ತಿದ್ದಾರೆ. ನಮ್ಮಲ್ಲಿಯೂ ಅವರ ಧರ್ಮಾಚರಣೆ, ಸಿದ್ಧಾಂತಗಳ ಬಗ್ಗೆ ಅಪಪ್ರಚಾರ ನಡೆಸಿ, ಜನರಲ್ಲಿ ದ್ವೇಷ ಉಕ್ಕುವಂತೆ ಭಾಷಣ ಮಾಡುವ ವಾಚಾಳಿಗಳಿದ್ದಾರೆ. ಒಟ್ಟಿನಲ್ಲಿ ಎರಡು ಕಡೆಯೂ ಮೆರೆಯುತ್ತಿರುವುದು ಧರ್ಮಾಂಧತೆ. ಹೀಗಾದರೆ ನಾವು ಒಂದಾಗುವುದು ಯಾವಾಗ? ನಮ್ಮ ಜನರ ತೆರಿಗೆ ಹಣ ಇರುವುದು ಕದನದ ನೆಪದಲ್ಲಿ ಶಸ್ತ್ರಾಸ್ತ್ರ ಖರೀದಿ, ನಾಯಕರ ಕಮಿಷನ್, ಶ್ರೀಮಂತ ರಾಷ್ಟ್ರಗಳ ಖಜಾನೆ ಭರ್ತಿ ಮಾಡಲಿಕ್ಕಾಗಿಯೇ?
ದ್ವೇಷಕ್ಕೆ ಪ್ರತೀಕಾರ ಹಾಗೂ ಪ್ರತಿದ್ವೇಷದ ಬದಲು, ಪ್ರೀತಿ– ನಂಬಿಕೆ ಪರ್ಯಾಯವಾಗಬೇಕು. ಎರಡೂ ರಾಷ್ಟ್ರಗಳಲ್ಲಿ ಶಾಂತಿ ಬಯಸುವ ಜನರೇ ಹೆಚ್ಚಾಗಿರುತ್ತಾರೆ ಎಂಬುದು ನಮ್ಮ ನೆನಪಿನಲ್ಲಿ ಇರಬೇಕು. ಆದರೆ, ಜಾಲತಾಣಗಳನ್ನು ಗಮನಿಸಿದಾಗ, ಭರವಸೆಯೇ ಇಲ್ಲದಂತಹ ವಾತಾವರಣ ಸೃಷ್ಟಿಯಾಗಿದೆ. ಇಂಥದ್ದನ್ನೇ ಬಳಸಿಕೊಂಡು ರಾಜಕೀಯ ಪಕ್ಷಗಳು ಲಾಭ ಪಡೆದುಕೊಳ್ಳುವ ಹುನ್ನಾರ ನಡೆಸಿವೆಯೇ ಎಂಬ ಅನುಮಾನ ಮೂಡುತ್ತದೆ.
ಈಗ ನಾವು ಯುದ್ಧೋತ್ಸಾಹದ ಮಾತನಾಡುತ್ತೇವೆ. ಯುದ್ಧವೆಂದರೆ ಕ್ರಿಕೆಟ್ ಟೂರ್ನಮೆಂಟ್ ಎಂದು ಭಾವಿಸಿದ್ದಾರಾ ನಮ್ಮ ಅತಿರೇಕವಾದಿಗಳು? ಹಾಗೆಂದು ಕೈಕಟ್ಟಿಕೊಂಡು ಕುಳಿತಿರಬೇಕಾದ ಅಗತ್ಯವಿಲ್ಲ. ನಾವು ಪರಸ್ಪರ ನಂಬಿಕೆಯ ವಾತಾವರಣವನ್ನು ಸೃಷ್ಟಿಸಬೇಕಿದೆ. ಧಾರ್ಮಿಕ, ಸಾಂಸ್ಕೃತಿಕ ರಾಜಕೀಯ ‘ಸೇತುವೆ’ ಕಟ್ಟಬೇಕಿದೆ. ಜಿ.ಎಸ್.ಶಿವರುದ್ರಪ್ಪನವರ ಕವನದ ಸಾಲು ‘ಮನುಜರ ನಡುವಣ ಅಡ್ಡಗೋಡೆಗಳ ಕೆಡವುತ ಸೇತುವೆಯಾಗೋಣ’ ಎಂಬಂತೆ ಪರಸ್ಪರ ನಂಬಿಕೆ, ಪ್ರೀತಿ ಹುಟ್ಟುವಂತಹ ವಿಚಾರಗಳಿಗೆ ಪ್ರೋತ್ಸಾಹ ಕೊಡಬೇಕಾಗಿದೆ. ತನ್ನದಲ್ಲದ ತಪ್ಪಿಗೆ ಸಾಯುವ ಯೋಧರು ನಮ್ಮ ಆಕ್ರೋಶಕ್ಕೆ ಏಕೆ ಬಲಿಯಾಗಬೇಕು? ಸಮಾಧಾನದಿಂದ ಯೋಚಿಸಿ.
ರಾಯಚೂರು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.