ಉತ್ತರ ಕರ್ನಾಟಕದಲ್ಲಿ ಕಂಡುಬರುತ್ತಿರುವ ಪ್ರವಾಹಕ್ಕೆ ನದಿ ಪಾತ್ರಗಳಲ್ಲಿ ಆದ ಮಾನವನ ಅತಿಕ್ರಮಣ, ಬದಲಾದ ಜನಜೀವನ ಪ್ರಮುಖ ಕಾರಣಗಳು. ಕೆಲವು ದಶಕಗಳ ಹಿಂದೆ ನಾನು ಕೆಲ ವರ್ಷ ಉತ್ತರ ಕರ್ನಾಟಕದಲ್ಲಿ ಇದ್ದೆ. ಅಲ್ಲಿನ ಜನಜೀವನದ ಭಾಗವಾಗಿದ್ದ ವಸ್ತುಗಳಲ್ಲಿ ತೇಲು ಬುರುಡೆಗಳೂ ಸೇರಿದ್ದವು. ನದಿ ದಂಡೆಯ ಮೇಲೆ ವಾಸಿಸುವ ಎಲ್ಲರ ಮನೆಗಳಲ್ಲೂ ಸಾಧಾರಣವಾಗಿ ಒಂದೆರಡಾದರೂ ತೇಲು ಬುರುಡೆಗಳು ಇದ್ದೇ ಇರುತ್ತಿದ್ದವು.
ಸಾಧಾರಣವಾಗಿ ತೊಡೆ ಗಾತ್ರದ ಈ ಸೋರೆ ಬುರುಡೆಯೇ ನದಿ ದಾಟುವ ಸಾಧನವಾಗಿತ್ತು. ಜನರು ಬಿರುಸಿನ ಪ್ರವಾಹವಲ್ಲದ ಸಮಯಗಳಲ್ಲಿ, ನದಿಗೆ ಇಳಿಯುವಾಗ ಅದನ್ನು ಕಟ್ಟಿಕೊಂಡು ಯಾವ ಭಯವೂ ಇಲ್ಲದೆ ಸರಾಗವಾಗಿ ದಾಟುತ್ತಿದ್ದರು. ವಸ್ತುಗಳ ಸಾಗಣೆಯೂ ಸುಲಭವಾಗುತ್ತಿತ್ತು. ಸರ್ಕಾರದ ದೋಣಿಗಳು ಬಂದ ನಂತರ ಕೆಲವರು ಇವುಗಳನ್ನು ಕೈಬಿಟ್ಟರು. ನದಿಗೆ ಸೇತುವೆ ಕಟ್ಟಿದ ಮೇಲಂತೂ ಯಾರಿಗೂ ತೇಲು ಬುರುಡೆ ಬೇಕೇ ಆಗಲಿಲ್ಲ.
ಈಗಲಾದರೂ ನದಿ ದಡದ ನಾಗರಿಕರು ಎಲ್ಲಕ್ಕೂ ಸರ್ಕಾರದ ನೆರವನ್ನೇ ನಿರೀಕ್ಷಿಸದೆ ಸ್ವಯಂ ರಕ್ಷಣೆಗೆ ಮುಂದಾಗಬೇಕು. ಇದಕ್ಕೆ ಪೂರಕವಾಗಿ ತಮ್ಮದೇ ಯುವಕರ ಒಂದು ದಂಡನ್ನು ಕಟ್ಟಿಕೊಳ್ಳಬೇಕು. ಊರಿನ ಒಳಹೊಕ್ಕ ಹಿನ್ನೀರಿನಲ್ಲಿ ಕಾರ್ಯಾಚರಣೆ ನಡೆಸಲು ತೆಪ್ಪಗಳಿಗೆ ಬೇಕಾಗುವ ಸಾಮಗ್ರಿಗಳನ್ನು ಸಂಗ್ರಹಿಸಿ ಇಟ್ಟುಕೊಳ್ಳ ಬೇಕು. ಬಾಳೆಗಿಡವು ಒಂದು ಅತ್ಯುತ್ತಮ ತೆಪ್ಪ. ಕೆಲವು ಹಲಗೆಗಳು ಇದ್ದರೆ ಅದನ್ನು ಒಟ್ಟು ಮಾಡಿಕೊಳ್ಳಿ. ಉಪಯೋಗಕ್ಕೆ ಬಾರದ ರಬ್ಬರ್ ಟ್ಯೂಬ್ಗಳನ್ನೂ ಸಂಗ್ರಹಿಸಿ ಇಟ್ಟುಕೊಳ್ಳಬೇಕು. ಪ್ಲಾಸ್ಟಿಕ್ ಬಾಟಲಿಗಳು ಸಹ ಸೋರೆ ಬುರುಡೆಯ ಕೆಲಸವನ್ನು ಮಾಡಬಲ್ಲವು. ಯುದ್ಧಕಾಲೇ ಶಸ್ತ್ರಾಭ್ಯಾಸ ಅನ್ನುವಂತೆ ಆಗಬಾರದು. ನದಿಯ ಸಹಜ ಹರಿವಿನ ದಿನಗಳಲ್ಲಿ ಇವನ್ನೆಲ್ಲ ಪ್ರಾಯೋಗಿಕವಾಗಿ ಮಾಡಿನೋಡಿ, ಬಳಕೆಯನ್ನು ಕರಗತ ಮಾಡಿಕೊಳ್ಳಬೇಕು.
-ಡಾ. ಈಶ್ವರ ಶಾಸ್ತ್ರಿ ಮೋಟಿನಸರ, ಶಿರಸಿ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.