ವರ್ಕ್ಆರ್ಡರ್ ಇಲ್ಲದೇ ಗುತ್ತಿಗೆ ಕಾಮಗಾರಿ ಮಾಡಲು ಮೌಖಿಕ ಆದೇಶ ನೀಡಿ, ಈಗ ಶೇ 40 ಲಂಚದ ಹಣ ನೀಡದಿರುವಾಗ ಸತಾಯಿಸಿದ ಪ್ರಯುಕ್ತ ಆತ್ಮಹತ್ಯೆ ಮಾಡಿಕೊಂಡ ಆರೋಪ ಕೇಳಿಬಂದಿರುವ ಪ್ರಕರಣದಿಂದ ಲಂಚದ ಪ್ರಮಾಣ ಮಾತ್ರ ಬಯಲಾಗಿಲ್ಲ, ಸರ್ಕಾರದಲ್ಲಿ ವರ್ಕ್ಆರ್ಡರ್ ಇಲ್ಲದೆ ಮೌಖಿಕ ಆದೇಶದ ಮೂಲಕವೇ ಕೋಟ್ಯಂತರ ರೂಪಾಯಿ ಕಾಮಗಾರಿಗೆ ಹಸಿರು ನಿಶಾನೆ ತೋರಿಸುವುದು, ಅದರ ಬಿಲ್ ಪಾವತಿಸಲು ಶೇಕಡಾವಾರು ಹಣದ ಬೇಡಿಕೆ ಇಡುವುದು, ಅಕ್ರಮ ಹಣಕ್ಕಾಗಿ ಉನ್ನತ ಮಟ್ಟದಲ್ಲಿ ಚೌಕಾಸಿ ಮಾಡಿ, ಕೊನೆಗೆ ಅನೈತಿಕವಾಗಿ ಪರಸ್ಪರ ಒಪ್ಪಿಕೊಂಡು ಲಂಚ ಪಡೆಯುತ್ತಿರುವುದು ಸಾಬೀತಾಗಿದೆ.
ಒಂದೇ ಪಕ್ಷದವರ ನಡುವಿನ ಈ ಪ್ರಕರಣವು ‘ತಾಮ್ರದ ದುಡ್ಡು ತಾಯಿ-ಮಗಳ ಸಂಬಂಧ ಕೆಡಿಸಿತು’ ಎಂಬಂತಾಗಿ, ಗುತ್ತಿಗೆದಾರರು ಮತ್ತು ರಾಜಕಾರಣಿಗಳ ಒಳಸಂಚಿನ ಕರಾಳಮುಖ ಬಯಲಾಗಿದೆ. ಇದು ಕೇವಲ ಸಂತೋಷ ಪಾಟೀಲ ಪ್ರಕರಣವಲ್ಲ. ಪ್ರತಿಯೊಂದು ಕಾಮಗಾರಿಯಲ್ಲಿ ಮಂತ್ರಿ ಮಹೋದಯರಿಗೆ ನೀಡುವ ಕಪ್ಪ ಕಾಣಿಕೆಯ ನಿಲುವುಗನ್ನಡಿ ಅನಾವರಣಗೊಂಡಿದೆ. ಜನರು ಸರ್ಕಾರಿ ಕಾಮಗಾರಿಯ ಬಗ್ಗೆ ಚರ್ಚಿಸುವಾಗ ಆಡುಭಾಷೆಯಲ್ಲಿ ಹೇಳುವ ‘ಹಳೆ ಕಲ್ಲು, ಹೊಸ ಬಿಲ್ಲು’ ಎನ್ನುವ ಮಾತು ಈ ಪ್ರಕರಣದಲ್ಲಿ ನಿಜವಾದಂತಾಗಿದೆ.
ಗಣಪತಿ, ನಾಯ್ಕ್ ಕಾನಗೋಡ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.