ADVERTISEMENT

ಸಂಭಾವ್ಯ ಹಾನಿಯ ನಿಖರ ಅಂದಾಜು ಆಗಲಿ

​ಪ್ರಜಾವಾಣಿ ವಾರ್ತೆ
Published 17 ಜನವರಿ 2022, 15:15 IST
Last Updated 17 ಜನವರಿ 2022, 15:15 IST

ಮೇಕೆದಾಟು ಯೋಜನೆಗೆ ಸಂಬಂಧಿಸಿದಂತೆ ಮೇಧಾ ಪಾಟ್ಕರ್ ಅವರ ಹೇಳಿಕೆ ಹಾಗೂ ಅದಕ್ಕೆ ಡಿ.ಕೆ.ಶಿವಕುಮಾರ್‌ ಅವರ ಪ್ರತಿಕ್ರಿಯೆ ಓದಿ ಈ ಪತ್ರ. ಮೂಲತಃ ಇದು ‘ಬೃಹತ್’ ನೀರಾವರಿ ಯೋಜನೆ ಅಲ್ಲ. ಕಾವೇರಿ ನದಿ ಸದ್ಯಕ್ಕಂತೂ ಸಟ್ಲೆಜ್‌ನಂತಾಗದು. ವೃಷಭಾವತಿ ಪ್ರದೇಶದಲ್ಲಿ ಹಿಂದಿನ‌ ವರ್ಷ ತುಸು ಸುಧಾರಣೆ ಆಗಿದೆ. ಮೇಧಾ ಅವರು ಹೇಳಿರುವ ಇತರ ಅಂಶಗಳು ಸುಮಾರು ಮೂವತ್ತು ವರ್ಷ ಹಳೆಯವು. ಈ ಯೋಜನೆಗೆ ವಿದೇಶಿ ಆರ್ಥಿಕ ನೆರವು ದೊರಕುವ ಬಗೆಗೆ ಮಾಹಿತಿ ಇಲ್ಲ. ಮುಳುಗಡೆಯಾಗುವ ಐದು ಹಳ್ಳಿಗಳಲ್ಲಿ ಆದಿವಾಸಿಗಳು ಎಷ್ಟಿದ್ದಾರೆ? ತಿಳಿಯಲಿ. ಅರಣ್ಯ ಭೂಮಿಯಲ್ಲಿ ಅಭಯಾರಣ್ಯದ ಪ್ರದೇಶವೇ ಹೆಚ್ಚು. ಸಂಭಾವ್ಯ ಹಾನಿಯ ನಿಖರ ಅಂದಾಜು ಆಗಬೇಕು.

ಮಂಡ್ಯದ ಆ್ಯಕ್ಟಿವಿಸ್ಟ್‌ ಒಬ್ಬರು ‘ಹೆಚ್ಚುವರಿ ನೀರು ನೀರಾವರಿಗೆ ಸಿಗುತ್ತದೆ ಎಂಬುದು ಸುಳ್ಳು ಆಶ್ವಾಸನೆ’ ಎಂದಿದ್ದಾರೆ. ಇದು ಕುಡಿಯುವ ನೀರು ಹಾಗೂ ವಿದ್ಯುತ್ ಉತ್ಪಾದನೆಗೆ ಸೀಮಿತವಾದ ಯೋಜನೆ. ‘ಮುಂದೆ ಒಂದು ಜಿಲ್ಲೆಯನ್ನು ಇನ್ನೊಂದರ ವಿರುದ್ಧ ಎತ್ತಿಕಟ್ಟಬಹುದು’ ಎಂದೂ ಹೆದರಿಸಿದ್ದಾರೆ. ಈಗಾಗಲೇ ಯಾವ ಕೆರೆಗೆ ನೀರು ಬಿಡಬೇಕು ಎಂಬ ಬಗೆಗೆ ತಾಲ್ಲೂಕುಗಳ ನಡುವೆಯೇ ತಿಕ್ಕಾಟ ಇಲ್ಲವೇ? ನ್ಯಾಯಾಲಯ ಇದೇ 23ರಂದು ವಿಚಾರಣೆ ನಡೆಸಲಿದೆ. ಕ್ಲಿಯರೆನ್ಸ್ ಸಿಕ್ಕರೂ ವಿವಿಧ ಇಂಪ್ಯಾಕ್ಟ್ ಅಸೆಸ್ಮೆಂಟ್ ನಡೆಯುತ್ತವೆ. ಹೀಗಿರುವಾಗ ಪಾದಯಾತ್ರೆ ಹಾಗೂ ಇಂತಹ ‘ಪ್ರಚಾರ’ ಕಾರ್ಯಗಳು ನಡೆಯಬೇಕೆ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT