ಕೋಲಾರ ಜಿಲ್ಲೆಯ ಮಾಲೂರು ತಾಲ್ಲೂಕಿನ ಉಳ್ಳೇರಹಳ್ಳಿಯ ಗ್ರಾಮ ದೇವತೆಯ ಮೆರವಣಿಗೆಯ ಸಂದರ್ಭದಲ್ಲಿ ದೇವತೆಯ ಗುಜ್ಜುಕೋಲು ಮುಟ್ಟಿದನೆಂಬ ಕಾರಣಕ್ಕೆ, ಪರಿಶಿಷ್ಟ ಸಮುದಾಯಕ್ಕೆ ಸೇರಿದ ಒಬ್ಬ ಬಾಲಕನನ್ನು ಆ ಊರಿನ ಪ್ರಬಲ ಸಮುದಾಯಕ್ಕೆ ಸೇರಿದ ಕೆಲವರು ಹೊಡೆದಿರುವುದು ಮತ್ತು ಆತನ ಕುಟುಂಬಕ್ಕೆ ₹ 60 ಸಾವಿರ ದಂಡ ವಿಧಿಸಿ, ಬಹಿಷ್ಕಾರದ ಬೆದರಿಕೆ ಹಾಕಿರುವುದು ಖಂಡನೀಯ ಮತ್ತು ಅಮಾನವೀಯ. ಇದು ಆ ಪ್ರದೇಶದಲ್ಲಿ ಇನ್ನೂ ಜೀವಂತವಾಗಿರುವ ಊಳಿಗಮಾನ್ಯ ವ್ಯವಸ್ಥೆಯ ಪ್ರತೀಕ. ಇಂತಹ ಹೇಯ ಕೃತ್ಯಕ್ಕೆ ಕಾರಣರಾದವರೆಲ್ಲರಿಗೆ ತಲಾ ₹ 60 ಸಾವಿರ ದಂಡ ಮತ್ತು ಆ ಊರಿನಿಂದ ಕನಿಷ್ಠ 6 ವರ್ಷಗಳ ಕಾಲ ಗಡಿಪಾರು ಮಾಡಬೇಕು.
ಇಂಥ ನೀಚ ಕೃತ್ಯಗಳು ನಡೆಯದಂತೆ ಎಚ್ಚರ ವಹಿಸಬೇಕು. ಈ ನಾಡಿನ, ಪ್ರಮುಖವಾಗಿ ಗ್ರಾಮೀಣ ಪ್ರದೇಶಗಳಲ್ಲಿ ವೈಚಾರಿಕ ಚಳವಳಿಯ ಅಗತ್ಯ ಇದೆ ಎಂಬುದನ್ನು ಈ ಘಟನೆ ಪರೋಕ್ಷವಾಗಿ ಬಿಂಬಿಸುತ್ತದೆ. ಬಸವಣ್ಣ, ಕನಕದಾಸ, ಕುವೆಂಪು ಅವರಂಥ ದಾರ್ಶನಿಕ ವ್ಯಕ್ತಿತ್ವವುಳ್ಳವರು ಹುಟ್ಟಿರುವ ನಮ್ಮ ಕನ್ನಡ ನಾಡಿನಲ್ಲಿ ಇಂಥ ಬಾಲಿಶ ಹಾಗೂ ಅಸಹನೀಯ ಘಟನೆಗಳು ಸಂಭವಿಸದಂತೆ ಕಾರ್ಯಕ್ರಮಗಳನ್ನು ರೂಪಿಸುವುದು ನಾಡಿನ ಎಲ್ಲ ವೈಜ್ಞಾನಿಕ, ವೈಚಾರಿಕ ಮನೋಭಾವವುಳ್ಳವರ ಆದ್ಯ ಕರ್ತವ್ಯವಾಗಿದೆ.
–ಹೊರೆಯಾಲ ದೊರೆಸ್ವಾಮಿ,ಮೈಸೂರು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.