ಆನೆಗಳ ಭ್ರೂಣಹತ್ಯೆ ಮಾಡುವ ಮೂಲಕ ಅವುಗಳ ಹಾವಳಿ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಬೇಕೆಂಬ ಬಿಜೆಪಿ ಶಾಸಕ ಎಂ.ಪಿ.ಕುಮಾರಸ್ವಾಮಿ ಅವರ ಆಗ್ರಹ (ಪ್ರ.ವಾ., ಸೆ. 23) ಅಮಾನವೀಯವಾದುದು. ಮನುಷ್ಯನ ಸಹಜ ಜೀವಕ್ಕೆ ಅಪಾಯವನ್ನು ತಂದೊಡ್ಡುವ ಮತ್ತೊಂದು ಜೀವಿಯನ್ನು ನಿಯಂತ್ರಿಸಲು ಹಲವು ಮಾರ್ಗಗಳಿವೆ. ಅದನ್ನು ಬಿಟ್ಟು ಭ್ರೂಣಹತ್ಯೆ ರೂಪದಲ್ಲಿ ತನ್ನನ್ನು ರಕ್ಷಣೆ ಮಾಡಿಕೊಳ್ಳಬೇಕೆಂಬುದು ಅವಿವೇಕದ ವಿಚಾರ. ಸರಿಯಾದ ಮಾರ್ಗದಿಂದ ಅನ್ಯಜೀವಿಯನ್ನು ನಿಯಂತ್ರಿಸಿ ಮನುಷ್ಯ ರಕ್ಷಣೆ ಪಡೆಯಬೇಕೇ ವಿನಾ ಅದನ್ನು ಸಾಯಿಸಿ ಅಲ್ಲ.
ಸೃಷ್ಟಿಯಲ್ಲಿ ಮನುಷ್ಯನಂತೆ ಇತರ ಜೀವಿಗಳಿಗೂ ಜೀವಿಸುವ ಹಕ್ಕಿದೆ. ಜೀವಿ ವ್ಯವಸ್ಥೆಯಲ್ಲೇ ಹೆಚ್ಚಿನ ವೈಚಾರಿಕ ಸಾಮರ್ಥ್ಯವನ್ನು ಹೊಂದಿರುವ ಏಕೈಕ ಜೀವಿಯಾದ ಮನುಷ್ಯ, ಮಾನವೀಯತೆಯ ನೆಲೆಗಟ್ಟಿನಲ್ಲಿ ಚಿಂತಿಸಿ, ಇತರ ಜೀವಿಗಳ ಜೀವಕ್ಕೆ ಧಕ್ಕೆಯಾಗದಂತೆ ನಿಯಂತ್ರಿಸುವ ಕ್ರಮವನ್ನು ಅನುಸರಿಸಬೇಕಾಗಿರುವುದು ಅಗತ್ಯವಾಗಿದೆ.
–ಸೋಮಲಿಂಗಪ್ಪ ಬೆಣ್ಣಿ ಗುಳದಳ್ಳಿ,ಕೊಪ್ಪಳ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.