ADVERTISEMENT

ವಾಚಕರ ವಾಣಿ | ಹೆಬ್ಬೆಟ್ಟುಗಳಲ್ಲ, ಹೆಮ್ಮೆಯ ಕನ್ನಡಿಗರು

ಎಚ್.ಎನ್.ಜಯರಾಮ್, ಹಂದಿಕುಂಟೆ.ಸಿರಾ (ತಾ)
Published 13 ಫೆಬ್ರುವರಿ 2022, 19:45 IST
Last Updated 13 ಫೆಬ್ರುವರಿ 2022, 19:45 IST

ಕನ್ನಡ ಸಾಹಿತ್ಯ ಪರಿಷತ್ತಿನ ಸದಸ್ಯರಲ್ಲಿ ಸುಮಾರು 30,000 ಹೆಬ್ಬೆಟ್ಟುಗಳಿರುವುದಾಗಿ ಪರಿಷತ್ತಿನ ಅಧ್ಯಕ್ಷ ಮಹೇಶ ಜೋಶಿ ಅವರು ಹೇಳಿರುವುದು ಸಮಂಜಸವಲ್ಲ. ಅವರು ನಮ್ಮ ಹೆಮ್ಮೆಯ ಕನ್ನಡಿಗರು. ನಮ್ಮ ದೇಶದಲ್ಲಿ ಗ್ರಾಮ ಪಂಚಾಯಿತಿ ಸದಸ್ಯರಿಂದ ಹಿಡಿದು ಪ್ರಧಾನಿಯನ್ನು ಆಯ್ಕೆ ಮಾಡುವವರವರೆಗೂ ಮತದಾರರಲ್ಲಿ ಈ ಅನಕ್ಷರಸ್ಥರು ಸಹ ಸೇರಿರುತ್ತಾರೆ.

ಕನ್ನಡ ನಾಡಿನ ಮೊದಲ ಲಾಕ್ಷಣಿಕ ಗ್ರಂಥವಾದ ಕವಿರಾಜ ಮಾರ್ಗದಲ್ಲಿ ‘ಕುರಿತೋದದೆಯುಂ ಕಾವ್ಯ ಪ್ರಯೋಗ ಪರಿಣತ ಮತಿಗಳ್‌...’ (ಕನ್ನಡಿಗರು ಓದದೇ ಬರೆಯದೇ ಇದ್ದರೂ ಅವರು ಕಾವ್ಯವನ್ನು ಕಟ್ಟುತ್ತಿದ್ದರು) ಎಂದು ಹೇಳಲಾಗಿದೆ. ಎಲ್ಲಾ ಸಾಹಿತ್ಯಗಳ ಬೇರು ಎಂದು ಹೇಳುವ ಜನಪದ ಸಾಹಿತ್ಯವನ್ನು ರಚನೆ ಮಾಡಿರುವವರು ಅನಕ್ಷರಸ್ಥರೇ. ಅವರು ಎಂತೆಂತಹ ಸಾಹಿತ್ಯವನ್ನು ರಚಿಸಿದ್ದಾರೆಂದು ಒಮ್ಮೆ ನಾವು ಮನನ ಮಾಡಿಕೊಳ್ಳಬಹುದು.

ನಾಡಿಗೆ ಅನ್ನ ನೀಡುವ ರೈತರಲ್ಲಿ ಬಹುತೇಕರು ಅನಕ್ಷರಸ್ಥರು. ಹಾಗೆಯೇ ಕುಂಬಾರಿಕೆ ಮಾಡುವವರು, ಬುಟ್ಟಿ ಹೆಣೆಯುವವರು, ನೇಕಾರರು, ಗೊಂದಲಿಗರು, ಹರಿಕಥೆ ಹೇಳುವ ಜನಪದರು ಹೀಗೆ ಗ್ರಾಮೀಣ ಪ್ರದೇಶದ ಗುಡಿ ಕೈಗಾರಿಕೆಯಲ್ಲಿ ತೊಡಗಿಕೊಂಡವರು ಅನಕ್ಷರಸ್ಥರಾಗಿದ್ದಾರೆ. ಅವರು ತಮ್ಮ ಕೌಶಲದಲ್ಲಿ ಅಪ್ರತಿಮ ತಂತ್ರಜ್ಞಾನ ಹೊಂದಿದ್ದಾರೆ ಎಂಬುದನ್ನು ನಾವು ಮರೆಯುವಂತಿಲ್ಲ. ಹಾಗಾಗಿ, ಪರಿಷತ್ತಿನಲ್ಲಿರುವ ಅನಕ್ಷರಸ್ಥರನ್ನು ಹೆಬ್ಬೆಟ್ಟುಗಳೆಂದು ಹೀಯಾಳಿಸುವುದು ಸರಿಯಲ್ಲ.

-ವೀರಹನುಮಾನ,ರಾಯಚೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT