ADVERTISEMENT

ಲಿಂಗಾಯತ, ಕುರುಬ, ಒಕ್ಕಲಿಗ ಇವು ಜಾತಿಗಳಲ್ಲ: ಹೋರಾಟದ ಭಾಗವಾಗಿ ರೂಪುಗೊಂಡ ಅಸ್ಮಿತೆ

​ಪ್ರಜಾವಾಣಿ ವಾರ್ತೆ
Published 7 ಜೂನ್ 2020, 18:53 IST
Last Updated 7 ಜೂನ್ 2020, 18:53 IST
   

‘ಲಿಂಗಾಯತ’ ಎನ್ನುವುದು ಸಾಮಾಜಿಕ ಅಸ್ಮಿತೆ ಹೊರತು ಜಾತಿಯಲ್ಲ. ಸಾದರು, ನೊಣಬರು, ಪಂಚಾಚಾರ್ಯ ಇತ್ಯಾದಿ ಜಾತಿಗಳು...! ‘ಬ್ರಾಹ್ಮಣ’ ಜಾತಿಯಲ್ಲ ಅದೂ ಒಂದು ಅಸ್ಮಿತೆ. ಮಾಧ್ವರು, ಶ್ರೀವೈಷ್ಣವರು, ಹವ್ಯಕರು, ಸಾರಸ್ವತ, ಗೌಡಸಾರಸ್ವತ, ಶಿವಳ್ಳಿ ಬ್ರಾಹ್ಮಣರು, ಕೋಟಾ ಇತ್ಯಾದಿ ಜಾತಿಗಳು! ಒಕ್ಕಲಿಗರು ಒಂದು ಜಾತಿಯಲ್ಲ, ಅದೂ ಅಸ್ಮಿತೆ. ಬದಲಾಗಿ ನಾಗೊಕ್ಕಲಿಗ, ನಾಮಧಾರಿ ಒಕ್ಕಲಿಗ, ಕುಡುವಕ್ಕಲಿಗ, ಹಾಲಕ್ಕಿ ಒಕ್ಕಲಿಗರು ಇವು ಜಾತಿಗಳು! ಕುರುಬರು ಒಂದು ಜಾತಿಯಲ್ಲ ಅದೂ ಒಂದು ಅಸ್ಮಿತೆ. ಹಾಲುಮತ, ಉಣ್ಣೆಕಂಕಣ, ಹತ್ತಿಕಂಕಣ, ಹಂಡೆಕುರುಬ, ಗೊಂಡ, ರಾಜಗೊಂಡ ಇವು ಜಾತಿಗಳು!

ಲಿಂಗಾಯತ, ಬ್ರಾಹ್ಮಣ, ಕುರುಬ, ಒಕ್ಕಲಿಗ ಎಂಬುದು ಹಲವು ಪಂಗಡಗಳನ್ನು ಸೇರಿಸಿದ ಒಂದು ಪಾರಂಪರಿಕ ಸಾಮಾಜಿಕ ಅಸ್ಮಿತೆಯಾಗಿತ್ತು. 19ನೇ ಶತಮಾನದಲ್ಲಿ ಹೊಸ ರಾಜಕೀಯ ರಚನೆಯ ಕಾರಣಕ್ಕೆ ಇವುಗಳ ನಾಯಕರು ಎಲ್ಲರನ್ನೂ ಒಗ್ಗೂಡಿಸುವ ಚರ್ಚೆ ಆರಂಭಿಸಿ ಇವುಗಳನ್ನು ಜಾತಿಗಳಂತೆ ಬಿಂಬಿಸಿದರು. ಆ ಪ್ರಕ್ರಿಯೆ ಈಗಲೂ ನಡೆಯುತ್ತಿದೆ. ಆದರೆ ಬಹುತೇಕರು ಇಂದಿಗೂ ತಮ್ಮ ನೈಜ ಜಾತಿಗಳ ಮೂಲಕವೇ ಸಾಮಾಜಿಕವಾಗಿಗುರುತಿಸಿಕೊಳ್ಳುತ್ತಾರೆ ಮತ್ತು ವ್ಯವಹರಿಸುತ್ತಾರೆಯೇ ವಿನಾ ಸಾಮಾಜಿಕ ಅಥವಾ ರಾಜಕೀಯ ಅಸ್ಮಿತೆಗಳ ಭಾಗವಾಗಿ ಅಲ್ಲ.

ಇವುಗಳಂತೆಯೇ ನಾವು ‘ದಲಿತ’ ಎಂಬುದು 18-19ನೇ ಶತಮಾನದ ತಳಸಮುದಾಯಗಳ ಪ್ರಜ್ಞಾಪೂರ್ವಕ ಹೋರಾಟದ ಭಾಗವಾಗಿ ರೂಪುಗೊಂಡ ಸಾಮಾಜಿಕ ಮತ್ತು ರಾಜಕೀಯ ಅಸ್ಮಿತೆ ಎಂದು ಏಕೆ ಅರ್ಥಮಾಡಿಕೊಳ್ಳುತ್ತಿಲ್ಲ! ಪರಿಶಿಷ್ಟ ಜಾತಿ– ಪಂಗಡ, ಹಿಂದುಳಿದ ಜಾತಿಗಳು, ಸಾಮಾನ್ಯ ಜಾತಿಗಳು ಎಂಬ ವಿಂಗಡಣೆಗಳು ಹಲವು ಆಯೋಗಗಳ ಸಲಹೆಯ ಮೂಲಕ ಪ್ರಭುತ್ವ ರೂಪಿಸಿರುವ ಸರ್ಕಾರಿ ಕೆಟಗರಿಗಳು.

ADVERTISEMENT

ಇಂದು ದಲಿತರನ್ನು ಪರಿಶಿಷ್ಟ ಜಾತಿ– ಪಂಗಡ ಎಂಬ ಸರ್ಕಾರಿ ಕೆಟಗರಿಯ ಹೆಸರಿನಲ್ಲಿ ಮಾತ್ರ ಕರೆಯಬೇಕು ಎನ್ನುವವರು ನಾಳೆ ಲಿಂಗಾಯತ, ಒಕ್ಕಲಿಗ, ಬ್ರಾಹ್ಮಣರನ್ನು ಕೇವಲ ಹಿಂದುಳಿದ(ಒಬಿಸಿ) ಮತ್ತು ಸಾಮಾನ್ಯ ಜಾತಿಗಳು ಎಂದು ಸರ್ಕಾರಿ ಕೆಟಗರಿಯ ಹೆಸರಿನಲ್ಲಿ ಮಾತ್ರ ಕರೆಯಬೇಕು ಎಂದು ಆದೇಶ ಜಾರಿಗೊಳಿಸಲು ಸಾಧ್ಯವೇ? ಜಾರಿಗೊಳಿಸಿದರೆ ಪರಿಣಾಮ ಹೇಗಿರಬಹುದು?!
-ಕಿರಣ್ ಎಂ.ಗಾಜನೂರು,ಕಲಬುರ್ಗಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.