ಕರ್ನಾಟಕ ಭೂಸುಧಾರಣಾ ಕಾಯ್ದೆಗೆ ತಿದ್ದುಪಡಿ ತರಲು ರಾಜ್ಯ ಸರ್ಕಾರ ಅಮಿತೋತ್ಸಾಹ ತೋರುತ್ತಿದೆ. ಈ ಮೊದಲು ₹ 25 ಲಕ್ಷದವರೆಗೆ ಕೃಷಿಯೇತರ ಆದಾಯ ಹೊಂದಿದ್ದವರು ಮಾತ್ರ ಕೃಷಿಭೂಮಿ ಖರೀದಿಸಬಹು
ದಾಗಿತ್ತು. ಈ ಕಾನೂನು ಜಾರಿಗೆ ಬಂದರೆ ಯಾರು ಬೇಕಾದರೂ ಕೊಳ್ಳಬಹುದು. ಆಗ ರಿಯಲ್ ಎಸ್ಟೇಟ್ ಉದ್ಯಮಿ ಗಳು, ಕೋಟ್ಯಧೀಶರು, ಆಗರ್ಭ ಶ್ರೀಮಂತರು ಸರದಿ ಸಾಲಿನಲ್ಲಿ ಕೃಷಿಭೂಮಿ ಖರೀದಿಸುವುದು ಖಂಡಿತ. ಆ ಬಳಿಕ ಅದು ಯಾವ ಉದ್ದೇಶಕ್ಕೆ ಬಳಕೆಯಾಗುತ್ತದೋ?
ಈಗಾಗಲೇ ಹವಾಮಾನ ವೈಪರೀತ್ಯ, ಕೊರೊನಾ ತಂದಿಟ್ಟ ಬಿಕ್ಕಟ್ಟು, ಬೆಲೆ ಅನಿಶ್ಚಿತತೆ ಮೊದಲಾದ ಸಂಕಷ್ಟಗಳಿಂದ ಬಳಲಿ ಬೆಂಡಾಗಿರುವ ನಮ್ಮ ರೈತಾಪಿ ವರ್ಗ, ಆ ಕ್ಷಣದ ಆವೇಶಕ್ಕೊಳಗಾಗಿ ಭೂಮಿ ಮಾರಿ, ನಂತರ ಕೊಳ್ಳಲಾಗದೇ ಪರಿತಪಿಸುವುದು ಅಕ್ಷರಶಃ ಸತ್ಯ. ಭವಿಷ್ಯದಲ್ಲಿ ಬಹುತೇಕ ಕೃಷಿಭೂಮಿಯು ಉಳ್ಳವರ ಪಾಲಾಗಿ, ನಾಡು ಕಾಂಕ್ರೀಟ್ ಕಾಡಾದರೆ ನಾವು ಉಣ್ಣುವುದೇನನ್ನು, ಮಣ್ಣನ್ನೇ? ನೋಟುಗಳನ್ನೇ? ಸರ್ಕಾರ ಯಾವುದೇ ಆಮಿಷಕ್ಕೆ ಬಗ್ಗದೆ ಈ ರೈತ ವಿರೋಧಿ ಕಾನೂನನ್ನು ಜಾರಿಗೊಳಿಸದಿರುವ ಮೂಲಕ ರೈತರ ಹಿತ ಕಾಯಬೇಕು.
ಕೆ.ಶ್ರೀನಿವಾಸ ರಾವ್,ಹರಪನಹಳ್ಳಿ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.