ADVERTISEMENT

ರೈತರಿಗೆ ಬೇಡವಾದ ನಿಗಮಗಳು

​ಪ್ರಜಾವಾಣಿ ವಾರ್ತೆ
Published 18 ಜೂನ್ 2020, 19:30 IST
Last Updated 18 ಜೂನ್ 2020, 19:30 IST

ಮಳೆಗಾಲದ ಆರಂಭದಲ್ಲಿ ಮಣ್ಣಿನ ಸಿದ್ಧತೆಗಾಗಿ ಹಸಿರು ಗೊಬ್ಬರ ಸೇರಿಸುವುದು ವಾಡಿಕೆ. ಮಣ್ಣಿನ ಸಾವಯವ ಕಾರ್ಬನ್ ಹೆಚ್ಚಿಸುವ ನಿಟ್ಟಿನಲ್ಲಿ ದಾಯಂಚಾ, ಸೆಣಬು, ಎಳ್ಳು, ಸಾಸಿವೆ, ಹುರುಳಿಯನ್ನು ಪೂರ್ವ ಮುಂಗಾರಿನಲ್ಲೇ ಬಿತ್ತುತ್ತಾರೆ. ತಿಂಗಳ ನಂತರ ಕಟಾವು ಮಾಡಿ ಮಣ್ಣಿಗೆ ಸೇರಿಸುತ್ತಾರೆ. ಬಿತ್ತನೆ ಬೀಜ ಸೇರಿದಂತೆ ಇಂತಹ ಗೊಬ್ಬರದ ಬೀಜವನ್ನು ರೈತರಿಗೆ ಕೈಗೆಟಕುವ ದರದಲ್ಲಿ ವಿತರಿಸುವ ಸಲುವಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಪ್ರತ್ಯೇಕವಾಗಿ ಬೀಜ ನಿಗಮಗಳನ್ನು ಸ್ಥಾಪಿಸಿವೆ. ಆದರೆ ಈ ನಿಗಮಗಳಲ್ಲಿ ರೈತನ ಅವಶ್ಯಕತೆಯ ಬೀಜಗಳು ಸಿಗುವುದು ಅಪರೂಪವೆನ್ನಬೇಕು. ಗೊಬ್ಬರದ ಜಾತಿಯ ಒಂದೇ ಒಂದು ಬೀಜ ಈ ವರ್ಷದ ಮಳೆಗಾಲದ ಆರಂಭದಲ್ಲಿ ದಾಸ್ತಾನಿರಲಿಲ್ಲ. ಸೋಜಿಗದ ಸಂಗತಿಯೆಂದರೆ, ಅಲ್ಲಿನ ಸಿಬ್ಬಂದಿಯೇ ಯಾವ ಖಾಸಗಿ ಅಂಗಡಿಯಲ್ಲಿ ಏನು ದೊರೆಯುತ್ತದೆ ಎಂಬ ಮಾಹಿತಿ ನೀಡುತ್ತಾರೆ.

ಯಾವುದೋ ಒಂದು ಅಂಗಡಿಯಲ್ಲಿ ಸಿಕ್ಕಿದ್ದು ದಾಯಂಚ ಮಾತ್ರ. ಅದರ ಬೆಲೆಯು ನಿಗಮ ನಿಗದಿಪಡಿಸಿರುವ ದರಕ್ಕಿಂತ ನಾಲ್ಕು ಪಟ್ಟು ಹೆಚ್ಚು. ಸಮಯಕ್ಕೆ ಸ್ಪಂದಿಸದ, ರೈತ ಸಮುದಾಯಕ್ಕೆ ಉಪಯೋಗವಿಲ್ಲದ ಈ ನಿಗಮಗಳನ್ನು ಮುಚ್ಚಿದರೂ ಏನೂ ನಷ್ಟವಿಲ್ಲ. ರೈತರಿಂದಲೇ ಬೀಜ ಖರೀದಿಸಿ, ಇತರ ರೈತರಿಗೆ ಮಾರ್ಗದರ್ಶನ ನೀಡಬೇಕಿದ್ದ ಸರ್ಕಾರಿ ನಿಗಮಗಳು ನಷ್ಟದ ಹಾದಿ ಹಿಡಿದಿರುವುದು ಖಾಸಗಿ, ಹೈಬ್ರಿಡ್ ಬೀಜ ಮಾರಾಟಗಾರರಿಗೆ ಅನುಕೂಲದ ಹಾದಿಯಾಗಿದೆ.

ಡಾ. ಶಾಂತರಾಜು ಎಸ್., ನೆಲಮಂಗಲ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.