ದೇಶದ ಆರ್ಥಿಕತೆಯ ಚೈತನ್ಯಕ್ಕೆ ಕೇಂದ್ರ ಸರ್ಕಾರವು ಆತ್ಮನಿರ್ಭರ್ ಪ್ಯಾಕೇಜ್, ನಗದು ವೋಚರ್, ಸರ್ಕಾರಿ ನೌಕರರಿಗೆ ₹ 10 ಸಾವಿರ ಮುಂಗಡ ಹಣ ನೀಡಿಕೆಯಂತಹ ಏನೆಲ್ಲ ಪ್ರಯತ್ನಗಳನ್ನು ಮಾಡಿದರೂ ಅಂದುಕೊಂಡಷ್ಟು ಮಟ್ಟದಲ್ಲಿ ಆರ್ಥಿಕ ಚೇತರಿಕೆಯನ್ನು ನಿರೀಕ್ಷಿಸುವುದು ಕಷ್ಟ. ಆರ್ಥಿಕತೆಯ ಮೂಲ ಜನಸಾಮಾನ್ಯರು. ಜನ ಯಾವಾಗ ನಿರ್ಭೀತರಾಗಿ ಮನೆಗಳಿಂದ ಹೊರಗೆ ಬರುತ್ತಾರೋ ಆಗ ಆರ್ಥಿಕತೆಯ ಚಕ್ರ ಸುತ್ತುತ್ತದೆ.
ಈಗ ಜನರಿಗೆ ಸಣ್ಣ ನೆಗಡಿ, ಕೆಮ್ಮು ಬಂದರೂ ಕೊರೊನಾ ಪರೀಕ್ಷೆ ಮಾಡಿಸಲಾಗುತ್ತದೆ. ಕೊರೊನಾ ಪಾಸಿಟಿವ್ ಬಂದರೆ ಆಸ್ಪತ್ರೆಗೆ ದಾಖಲಾಗಬೇಕು. ಅದರಲ್ಲೂ ಕೆಲವು ಆಸ್ಪತ್ರೆಗಳಲ್ಲಿ ಸರಿಯಾದ ವ್ಯವಸ್ಥೆಇಲ್ಲ. ಇನ್ನು ಕೆಲವೆಡೆ ಬೆಡ್ ಸಿಗುವುದಿಲ್ಲ. ಕೊರೊನಾ ಬಂದಿದೆ ಎಂದು ಅಕ್ಕಪಕ್ಕದವರಿಗೆ ಗೊತ್ತಾದರೆ ತಮ್ಮ ಜೊತೆ ನಡೆದುಕೊಳ್ಳುವ ರೀತಿಯೇ ಸಂಪೂರ್ಣ ಬದಲಾಗಿ ಬಿಡುತ್ತದೆ. ಹೀಗೆ ಹಲವಾರು ಗೊಂದಲ ಮತ್ತು ಭಯದಲ್ಲಿ ಜನರಿದ್ದಾರೆ.
ಎಲ್ಲಾ ಬಗೆಯ ಕೆಮ್ಮು, ನೆಗಡಿಯೂ ಕೋವಿಡ್ ಅಲ್ಲ, ಒಂದುವೇಳೆ ಕೊರೊನಾ ಸೋಂಕಿತರಾಗಿದ್ದರೂ ಎಲ್ಲರೂ ಆಸ್ಪತ್ರೆಯಲ್ಲಿಯೇ ಚಿಕಿತ್ಸೆ ಪಡೆಯಬೇಕಾದ ಅಗತ್ಯವಿಲ್ಲ, ಸಾಮಾನ್ಯವಾಗಿ ಕೊರೊನಾ ಸುರಕ್ಷಾ ಕ್ರಮಗಳನ್ನು ಅನುಸರಿಸಿದರೆ ಸಾಕು ಎಂಬುದನ್ನು ಮೊದಲು ಜನರಿಗೆ ಮನದಟ್ಟು ಮಾಡಿಸಬೇಕು. ಕೊರೊನಾಕ್ಕಿಂತ ಅದರ ಬಗೆಗಿನ ಭಯವೇ ನಮ್ಮನ್ನು ಹೆಚ್ಚು ದುರ್ಬಲರನ್ನಾಗಿ ಮಾಡುತ್ತದೆ. ಹೀಗಾಗಿ ವೈದ್ಯರು ರೋಗಿಗೆ ಚಿಕಿತ್ಸೆಯ ಜೊತೆಗೆ ಆತ್ಮಸ್ಥೈರ್ಯ ತುಂಬುವ ಕೆಲಸವನ್ನೂ ಮಾಡಬೇಕು. ಎಲ್ಲಿಯವರೆಗೆ ನಾವು ಕೊರೊನಾ ಬಗ್ಗೆ ಭಯ ಬಿಟ್ಟು ಎಚ್ಚರಿಕೆಯಿಂದ ವರ್ತಿಸುತ್ತೇವೆಯೋ ಅದು ನಮ್ಮ ಏಳ್ಗೆಗೆ ಸಹಕಾರಿ ಎಂಬುದನ್ನು ಅರಿಯಬೇಕು. ಸುರಕ್ಷಾ ನಿಯಮಗಳನ್ನು ಪಾಲಿಸುತ್ತಾ ಮೊದಲಿನ ಜೀವನಕ್ಕೆ ಮರಳಲು ಸಿದ್ಧರಾಗಬೇಕು. ಆಗ ಮಾತ್ರ ದೇಶದ ಆರ್ಥಿಕ ಚಕ್ರ ವೇಗ ಪಡೆಯಲು ಸಾಧ್ಯ.
- ಎಸ್.ನಾಗರಾಜ ನಾಗೂರ, ಬಾಗಲಕೋಟೆ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.