ನಗರ ಸ್ಥಳೀಯ ಸಂಸ್ಥೆಗಳ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಮೀಸಲಾತಿ ನಿಗದಿಗೊಳಿಸುವ ಪ್ರಕ್ರಿಯೆಯಲ್ಲಿ ಆಡಳಿತಾರೂಢರು ಪಕ್ಷ ರಾಜಕಾರಣಕ್ಕೆ ಒತ್ತು ಕೊಟ್ಟು ಮೀಸಲಾತಿಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವುದು ಅಭಿವೃದ್ಧಿಗೆ ಮಾರಕ ಎಂಬುದನ್ನು ಒತ್ತಿ ಹೇಳಿದ ಸಂಪಾದಕೀಯವು (ಪ್ರ.ವಾ., ಅ. 13) ಸಾಂದರ್ಭಿಕವಾಗಿದೆ ಮತ್ತು ಸಮರ್ಪಕವಾಗಿದೆ. ಪ್ರಜಾಪ್ರಭುತ್ವದ ಬೇರುಗಳು ಬಲಗೊಳ್ಳಬೇಕಾದರೆ ಅದರಲ್ಲಿ ಸ್ಥಳೀಯ ಸರ್ಕಾರಗಳ ಪಾತ್ರ ಬಹಳ ಮುಖ್ಯ. ಆದರೆ ನಮ್ಮನ್ನು ಆಳುವವರು ಈ ಅವಕಾಶವನ್ನು ತಮ್ಮ ಸ್ವಾರ್ಥಕ್ಕಾಗಿ, ರಾಜಕೀಯ ಲಾಭಕ್ಕಾಗಿ ದುರ್ಬಳಕೆ ಮಾಡಿಕೊಳ್ಳುತ್ತಿರುವುದು ದುರದೃಷ್ಟಕರ. ನಾಯಕತ್ವವನ್ನು ಬೆಳೆಸುವ ಅಖಾಡಗಳಾಗಬೇಕಾದ ಈ ಸಂಸ್ಥೆಗಳು ಇಂದು ದಾರಿ ತಪ್ಪಿರುವುದು ಇದೇ ಕಾರಣಕ್ಕಾಗಿ.
ಮೀಸಲಾತಿಯ ಅವಕಾಶವನ್ನು ತಮ್ಮ ಅನುಕೂಲಕ್ಕೆ ತಕ್ಕಂತೆ ಬಳಸಿಕೊಳ್ಳುವುದು ಒಂದು ಬಗೆಯ ಕೈಚಳಕವಾದರೆ,ಸ್ಥಳೀಯ ಸಂಸ್ಥೆಗಳ ದೈನಂದಿನ ಕಾರ್ಯನಿರ್ವಹಣೆಯಲ್ಲಿ ಶಾಸಕರು ಹಸ್ತಕ್ಷೇಪ ನಡೆಸುವುದು ಮತ್ತೊಂದು ಬಗೆಯ ರಾಜಕೀಯ ಮೇಲಾಟ. ಈ ಸಂಸ್ಥೆಗಳಿಗೆ ಸ್ವಾಯತ್ತತೆ ನೀಡುವ ದಿಸೆಯಲ್ಲಿ ಪಕ್ಷಭೇದವಿಲ್ಲದೆ ಎಲ್ಲರೂ ಕೈಜೋಡಿಸಬೇಕು. ಅಭಿವೃದ್ಧಿ ಕೇಂದ್ರಿತ ರಾಜಕಾರಣ ಮಾತ್ರ ಮುಖ್ಯವಾದಾಗ ಇದು ಸಾಧ್ಯ.
- ಬಿ.ಆರ್.ಅಣ್ಣಾಸಾಗರ, ಸೇಡಂ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.