ADVERTISEMENT

ವಾಚಕರ ವಾಣಿ: ಜಿಲ್ಲಾಧಿಕಾರಿ– ಜನಪ್ರತಿನಿಧಿ ಸಲ್ಲದ ಜಟಾಪಟಿ

​ಪ್ರಜಾವಾಣಿ ವಾರ್ತೆ
Published 29 ನವೆಂಬರ್ 2020, 18:33 IST
Last Updated 29 ನವೆಂಬರ್ 2020, 18:33 IST

ಹುಣಸೂರು ಶಾಸಕ ಎಚ್.ಪಿ.ಮಂಜುನಾಥ್ ಹಾಗೂ ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ
ಅವರ ನಡುವೆ ನಡೆಯುತ್ತಿರುವ ಜಟಾಪಟಿ ಮಾಧ್ಯಮಗಳಲ್ಲಿ ವರದಿಯಾಗುತ್ತಿದೆ. ತಮ್ಮ ಕ್ಷೇತ್ರದ ಜನರ ಕಷ್ಟ ಕಾರ್ಪಣ್ಯಗಳಿಗೆ ಜಿಲ್ಲಾಧಿಕಾರಿ ಸೂಕ್ತ ರೀತಿಯಲ್ಲಿ ಸ್ಪಂದಿಸುತ್ತಿಲ್ಲವೆಂದು ದೂರಿರುವ ಮಂಜುನಾಥ್, ಮೈಸೂರಿಗೆ ಮೂರನೇ ಮಹಾರಾಣಿಯ ಅಗತ್ಯವಿಲ್ಲವೆಂಬ ಅನುಚಿತ ಹೇಳಿಕೆ ನೀಡಿದ್ದಾರೆ. ಇದಕ್ಕೆ ಸಂಬಂಧಪಟ್ಟಂತೆ, ಸದರಿ ಶಾಸಕರಿಗೆ ಜಿಲ್ಲಾಧಿಕಾರಿ ಮೂರು ಪುಟಗಳ ಪತ್ರ ಬರೆದಿದ್ದು, ಶಾಸಕರ ಆರೋಪಗಳನ್ನು ತಳ್ಳಿಹಾಕಿದ್ದಾರೆ. ಈ ಪತ್ರವು ಶಾಸಕರನ್ನು ತಲುಪುವ ಮೊದಲೇ ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟವಾಗಿದೆ.

ಜಿಲ್ಲೆಯ ಸಂಪೂರ್ಣವಾದ ಆಡಳಿತಾತ್ಮಕ ಹೊಣೆಗಾರಿಕೆಯಿರುವ ಜಿಲ್ಲಾಧಿಕಾರಿ, ಜಿಲ್ಲಾ ದಂಡಾಧಿಕಾರಿಯೂ ಆಗಿರುವುದರಿಂದ ಅವರ ಮೇಲಿನ ಕಾರ್ಯ ಒತ್ತಡ ಸಹಜವಾಗಿ ಹೆಚ್ಚುತ್ತಲೇ ಇರುತ್ತದೆ. ಅದೇ ರೀತಿ, ಲಕ್ಷಾಂತರ ಜನರನ್ನು ಪ್ರತಿನಿಧಿಸುವ ಶಾಸಕರಿಗೂ ತಮ್ಮದೇ ಆದ ಕರ್ತವ್ಯ ಮತ್ತು ಜವಾಬ್ದಾರಿಗಳಿರುತ್ತವೆ. ಹೀಗಾಗಿ ಜಿಲ್ಲಾಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಪರಸ್ಪರ ಹೊಂದಿಕೊಂಡು ಕೆಲಸ ಮಾಡಬೇಕಾದುದು ಅತ್ಯಗತ್ಯ. ಸರ್ಕಾರಿ ಅಧಿಕಾರಿಗಳು ಜನಪ್ರತಿನಿಧಿಗಳನ್ನು ಹಗುರವಾಗಿ ಕಾಣುವಂತಿಲ್ಲ.‌

ಜನಪ್ರತಿಧಿಗಳು ತಾವು ಜನರಿಂದ ಆರಿಸಿ ಬಂದಿದ್ದೇವೆ ಎಂಬ ಒಂದೇ ಕಾರಣದಿಂದ ಸರ್ಕಾರದ ಯಾವುದೇ ನೌಕರ ಅಥವಾ ಅಧಿಕಾರಿಯನ್ನು ಅಗೌರವದಿಂದ ಕಾಣಬಾರದು. ‘ಗೀವ್‌ ರೆಸ್ಪೆಕ್ಟ್‌ ಆ್ಯಂಡ್‌ ಟೇಕ್‌ ರೆಸ್ಪೆಕ್ಟ್‌’ ಎಂಬ ಇಂಗ್ಲಿಷ್‌ ನುಡಿಗಟ್ಟು ಈ ಸಂದರ್ಭದಲ್ಲಿ ಉಲ್ಲೇಖನೀಯ.

ADVERTISEMENT

-ಕೆ.ವಿ.ವಾಸು, ಮೈಸೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.