ADVERTISEMENT

ಬಡ್ಡಿ ರದ್ದುಪಡಿಸಿ

​ಪ್ರಜಾವಾಣಿ ವಾರ್ತೆ
Published 11 ಜುಲೈ 2019, 17:20 IST
Last Updated 11 ಜುಲೈ 2019, 17:20 IST

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು (ಬಿಡಿಎ) 2018ರ ಕೊನೆಯಲ್ಲಿ ನಾಡಪ್ರಭು ಕೆಂಪೇಗೌಡ ಬಡಾವಣೆಯ ಎರಡನೇ ಹಂತದಲ್ಲಿ ಸಾವಿರಾರು ನಿವೇಶನಗಳನ್ನು ಹಂಚಿಕೆ ಮಾಡಿ, ಹಣ ಪಾವತಿಸಲು 60 ದಿನಗಳ ಕಾಲಾವಕಾಶ ನೀಡಿತ್ತು. ಆ ನಂತರ ಎರಡು ಹಂತದಲ್ಲಿ ತಲಾ ಮೂವತ್ತು ದಿನ ಅವಧಿಯನ್ನು ವಿಸ್ತರಿಸಿ, ಹಣ ಪಾವತಿಗೆ ಒಟ್ಟು 120 ದಿನಗಳ ಕಾಲಾವಕಾಶ ನೀಡಿತ್ತು.

ನಗರಾಭಿವೃದ್ಧಿ ಸಚಿವರು, ಬಿಡಿಎ ಆಯುಕ್ತರು ಮತ್ತು ಅಧ್ಯಕ್ಷರು ಮಾಧ್ಯಮಗೋಷ್ಠಿಯಲ್ಲಿ ಈ ವಿಷಯವನ್ನು ತಿಳಿಸಿದ್ದರು. ಆ ಸುದ್ದಿ ಪತ್ರಿಕೆಗಳಲ್ಲಿ ಪ್ರಕಟವೂ ಆಗಿತ್ತು. ಆದರೆ, ಈಗ ನಿವೇಶನಗಳನ್ನು ನೋಂದಣಿ ಮಾಡಿಕೊಡುವ ಸಂದರ್ಭದಲ್ಲಿ, ಬಿಡಿಎ ಅಧಿಕಾರಿಗಳು ವಿಸ್ತರಣೆಯ ಕಾಲಾವಧಿಗೆ ಶೇ 18 ಬಡ್ಡಿ ಪಾವತಿಸುವಂತೆ ಅಥವಾ ಪಾವತಿಸುವುದಾಗಿ ಮುಚ್ಚಳಿಕೆ ಬರೆದು ಕೊಡುವಂತೆ ಒತ್ತಾಯಿಸುತ್ತಿದ್ದಾರೆ. ಮುಚ್ಚಳಿಕೆ ಬರೆದು ಕೊಡದಿದ್ದರೆ ನೋಂದಣಿಯನ್ನೇ ಮಾಡುತ್ತಿಲ್ಲ. ‘ಕಾಲಾವಕಾಶ ವಿಸ್ತರಣೆಗೆ ಸರ್ಕಾರದಿಂದ ಇನ್ನೂ ಅನುಮೋದನೆ ಸಿಕ್ಕಿಲ್ಲ’ ಎಂದು ಅವರು ಹೇಳುತ್ತಿದ್ದಾರೆ.

ಹಾಗಿದ್ದರೆ, ಸರ್ಕಾರದ ಅನುಮೋದನೆ ಲಭಿಸುವ ಮೊದಲೇ ಖರೀದಿದಾರರಿಗೆ ಮತ್ತು ಮಾಧ್ಯಮಗಳಿಗೆ ಏಕೆ ಇಂಥ ಹೇಳಿಕೆ ಕೊಡಬೇಕಾಗಿತ್ತು? ಅನುಮೋದನೆ ಪಡೆಯಬೇಕಾದ್ದು ಬಿಡಿಎ ಕೆಲಸವೇ ಹೊರತು, ಖರೀದಿದಾರರದ್ದಲ್ಲ. ಬಿಡಿಎ ಮತ್ತು ಸರ್ಕಾರ ಈಗಲಾದರೂ ಮುತುವರ್ಜಿ ವಹಿಸಿ ಸಮಸ್ಯೆಯನ್ನು ಬಗೆಹರಿಸಬೇಕು.
-ಡಾ. ಬಿ.ಆರ್. ಸತ್ಯನಾರಾಯಣ, ಬೆಂಗಳೂರು
(ಇನ್ನೂ ಎಂಟು ಮಂದಿಯ ಸಹಿ ಇದೆ)

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.