‘ಅವರು ಹೀಗೇ ಮಾತನಾಡುತ್ತಾ ಹೋದರೆ, ಅವರ ಹಿಂದಿನದನ್ನು ಬಿಚ್ಚಿಡಬೇಕಾಗುತ್ತದೆ’, ‘ಇವರು ಹೀಗೆ ಮಾಡಿದರೆ, ಇವರ ಹಿಂದಿನ ಅಸಲಿಯತ್ತನ್ನು ಹೊರಗೆಳೆಯುತ್ತೇನೆ’, ‘ನನ್ನ ಬಾಯಿಯನ್ನು ತೆರೆಸಬೇಡಿ, ನಿಮ್ಮ ಕಥೆ ಹೊರಬಂದರೆ ನಿಮಗೇ ಕಷ್ಟ’– ಇವು, ಇತ್ತೀಚೆಗೆ ರಾಜಕಾರಣಿಗಳು ಪರಸ್ಪರ ದೋಷಾರೋಪ ಮಾಡುವಾಗ ಬಳಸುತ್ತಿರುವ ಪದಪುಂಜ.
ಇಂತಹ ಮಾತುಗಳನ್ನು ಕೆಲವರು ಪದೇ ಪದೇ ಹೇಳುತ್ತಾರೆಯೇ ವಿನಾ ‘ಹಿಂದಿನ ಅಸಲಿಯತ್ತನ್ನು’ ಬಿಚ್ಚಿಡುವ ಗೋಜಿಗೇ ಹೋಗುವುದಿಲ್ಲ. ಬಾಯಿಮಾತಿನಲ್ಲೇ ತಮ್ಮ ಸಮರಶೂರತ್ವವನ್ನು ಪ್ರದರ್ಶಿಸಿ
ಉತ್ತರಕುಮಾರನ ಪೌರುಷ ತೋರಿಸುತ್ತಾರೆ ಹೊರತು, ತಮ್ಮ ಆರೋಪಗಳಿಗೆ ಪುರಾವೆ ಒದಗಿಸುವುದೇ ಇಲ್ಲ.
ಸ್ವಾಮಿ... ರಾಜಕಾರಣಿಗಳೇ, ತಮಗೆ ತಮ್ಮ ವಿರೋಧಿಗಳ ಕಳ್ಳಾಟ, ಭ್ರಷ್ಟಾಚಾರ, ಭೂಕಬಳಿಕೆ, ಅನೈತಿಕ ಸಂಬಂಧಗಳು, ಕಳ್ಳ ವ್ಯವಹಾರಗಳ ಬಗ್ಗೆ ಗೊತ್ತಿದ್ದರೆ ದಯವಿಟ್ಟು ಅವುಗಳನ್ನು ಸಾಕ್ಷ್ಯ ಹಾಗೂ ದಾಖಲೆ ಸಮೇತ ಬಹಿರಂಗ ಮಾಡಿ.
ಅದು ಬಿಟ್ಟು ‘ನನ್ನ ಕೆಣಕಬೇಡಿ’, ‘ನನ್ನ ಬಾಯಿ ತೆರೆಸಬೇಡಿ’ ಎಂಬಂತಹ ಸಿನಿಮಾ ಡೈಲಾಗುಗಳನ್ನು ಹೊಡೆಯುವುದನ್ನು ನಿಲ್ಲಿಸಿ. ಪರಸ್ಪರರು ಹೀಗೆ ಬಹಿರಂಗಪಡಿಸುತ್ತಾ ಎರಡೂ ಕಡೆಯವರ ಬಣ್ಣ ಬಯಲಾದರೆ, ಮತದಾರರಿಗೆ ಸತ್ಯ ಏನೆಂಬುದು ತಿಳಿಯುತ್ತದೆ.
-ಸುಘೋಷ ಎಸ್. ನಿಗಳೆ, ಬೆಂಗಳೂರು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.