ಭಾರತವು ಬಹುಧರ್ಮ, ಬಹುಭಾಷೆ, ಬಹುಸಂಸ್ಕೃತಿ ಹೊಂದಿರುವ ಒಂದು ಉಪಖಂಡ. ಇಲ್ಲಿ ಬಹುಸಂಸ್ಕೃತಿಯ ಘನತೆಯನ್ನು ಎತ್ತಿಹಿಡಿಯುವಲ್ಲಿ ಮಹಿಳೆಯರ ಪಾತ್ರ ಹಿರಿದು. ಜನಸಂಖ್ಯೆಯ ಅರ್ಧದಷ್ಟಿರುವ ಇವರನ್ನು ಧಾರ್ಮಿಕ ಸಂಕೋಲೆಯಲ್ಲಿ ಬಂಧಿಸಿ ಶಬರಿಮಲೆಗೆ ಪ್ರವೇಶ ನೀಡದಿರುವುದು ಮಹಿಳೆಯರಿಗೆ ಮಾಡಿದ ಅವಮಾನವೇ ಸರಿ.
ಮಹಿಳೆಯರಿಗೆ ಇದ್ದ ನಿರ್ಬಂಧವನ್ನು ಸುಪ್ರೀಂ ಕೋರ್ಟ್ ತೆಗೆದುಹಾಕಿದರೂ ದೇವಸ್ಥಾನ ಪ್ರವೇಶಕ್ಕೆ ಅಲ್ಲಿನ ಆಡಳಿತ ಮಂಡಳಿ, ಪುರೋಹಿತಶಾಹಿ ಮತ್ತು ಪಟ್ಟಭದ್ರ ಹಿತಾಸಕ್ತಿಗಳು ಅಡ್ಡಿಪಡಿಸಿವೆ. ಇದೇ ಮಹಿಳೆಯರು ತಮ್ಮ ಪತಿ ಶಬರಿಮಲೆಗೆ ಹೋಗುವುದನ್ನು ತಡೆದರೆ ದೇವಸ್ಥಾನದ ಬಾಗಿಲು ಮುಚ್ಚಬೇಕಾಗುವ ಸ್ಥಿತಿ ಬರಬಹುದು.
ಶಬರಿಮಲೆ ಬೆಟ್ಟದಲ್ಲಿ ಜ್ಯೋತಿ ಕಾಣಿಸಿಕೊಳ್ಳುತ್ತದೆ ಎಂದು ಮುಗ್ಧ ಭಕ್ತರನ್ನು ನಂಬಿಸಲಾಗಿತ್ತು. ಆದರೆ ಅದು ಕಾಲಾಂತರದಲ್ಲಿ ಹುಸಿ ಎಂದು ಸಾಬೀತಾಯಿತು. ಮುಟ್ಟು, ಮೈಲಿಗೆ ಹೆಸರಿನಲ್ಲಿ ಪ್ರವೇಶ ನಿರಾಕರಿಸುವುದು ಸರಿಯಲ್ಲ. ಇಂತಹ ಅಜ್ಞಾನಕ್ಕೆ ಏನೆಂದು ಹೇಳುವುದು! ರೋಗಗ್ರಸ್ತ ಮನಸ್ಸುಗಳಿಗೆ ಮೊದಲು ಚಿಕಿತ್ಸೆ ನೀಡಬೇಕಾಗಿದೆ.
–ಸುರೇಶ ಆರ್.ಕಂದೇಗಾಲ, ಗುಂಡ್ಲುಪೇಟೆ ತಾಲ್ಲೂಕು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.