ಗೆಜೆಟೆಡ್ ಪ್ರೊಬೇಷನರಿ ಹುದ್ದೆಯ ನೇಮಕಾತಿಗಾಗಿ ಮುಖ್ಯ ಪರೀಕ್ಷೆಯ ಡಿಜಿಟಲ್ ಮೌಲ್ಯಮಾಪನದ ಅಂಕಗಳನ್ನು ತಿರುಚಲಾಗಿದೆ ಎಂಬ ಆರೋಪ ಕೇಳಿಬಂದಿರುವುದು (ಪ್ರ.ವಾ., ಜ. 6), ಕರ್ನಾಟಕ ಲೋಕಸೇವಾ ಆಯೋಗದ ಬಗ್ಗೆ ನಿರುದ್ಯೋಗಿಗಳಲ್ಲಿ ನಿರಾಶೆ ಹುಟ್ಟಿಸಿದೆ. ಕೋರ್ಟು, ಕಚೇರಿಗೆ ತಿರುಗಿ ನ್ಯಾಯ ಪಡೆಯುವ ವೇಳೆಗೆ ಅಭ್ಯರ್ಥಿಗಳಿಗೆ ವಯಸ್ಸಾಗಿರುತ್ತದೆ. ಇಂತಹ ನ್ಯಾಯ ವಿಳಂಬದಿಂದ ಭ್ರಷ್ಟರು ಶಿಕ್ಷೆಯಿಂದ ಪಾರಾಗುವ ಸಾಧ್ಯತೆಯೂ ಹೆಚ್ಚಾಗಿರುತ್ತದೆ.
ನಾನೂ ಕೆಎಎಸ್ ಅಧಿಕಾರಿ ಆಗಲೇಬೇಕೆಂದು ನಿಶ್ಚಯಿಸಿ ಹಿಂದೆ ಪರೀಕ್ಷೆ ತೆಗೆದುಕೊಂಡಿದ್ದೆ. ಮೊದಲ ಬಾರಿ ನಿರೀಕ್ಷೆಯಂತೆ ಫೇಲ್ ಆದೆ. ಎರಡನೇ ಬಾರಿ ಪರೀಕ್ಷೆ ಬರೆದಾಗ, ನಾನು ಆಯ್ಕೆಯಾಗುತ್ತೇನೆ, ಕೆಎಎಸ್ ಅಧಿಕಾರಿ ಆಗುತ್ತೇನೆ ಎಂದು ಕನಸು ಕಂಡೆ. ಆದರೆ ಫಲಿತಾಂಶ ಬಂದಾಗ ನನ್ನ ಅಂಕಪಟ್ಟಿಯಲ್ಲಿ 600 ಅಂಕಗಳ 3 ವಿಷಯಗಳಿಗೆ ಅಂಕಗಳೇ ನಮೂದಾಗಿರಲಿಲ್ಲ! ಇದು ನಡೆದದ್ದು 80ರ ದಶಕದಲ್ಲಿ. ಹೆಚ್ಚಿನ ತಿಳಿವಳಿಕೆ, ಮಾರ್ಗದರ್ಶಕರು ಇಲ್ಲದಿದ್ದುದರಿಂದ ನನಗೆ ಏನು ಮಾಡಬೇಕೆಂಬುದೇ ತಿಳಿಯಲಿಲ್ಲ. ಇದಕ್ಕೆ ಜವಾಬ್ದಾರರು ಯಾರು ಎಂಬುದು ನನ್ನಲ್ಲಿ ಪ್ರಶ್ನೆಯಾಗಿಯೇ ಉಳಿದುಬಿಟ್ಟಿತು.
-ಎಂ.ಕೆ.ವಾಸುದೇವರಾಜು, ಮೈಸೂರು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.