ADVERTISEMENT

ವಾಚಕರ ವಾಣಿ | ಮತ್ತೆ ಬೀದಿಗೆ ಬಿದ್ದಿದ್ದಾರೆ ಭಿಕ್ಷುಕರು

​ಪ್ರಜಾವಾಣಿ ವಾರ್ತೆ
Published 31 ಜುಲೈ 2020, 19:30 IST
Last Updated 31 ಜುಲೈ 2020, 19:30 IST

ಕೊರೊನಾದಿಂದ ಲಾಕ್‌ಡೌನ್‌ ಘೋಷಣೆಯಾಗಿ ಊರಿಗೆ ಊರೇ ಸ್ತಬ್ಧವಾದಾಗ, ಭಿಕ್ಷುಕರ ಸ್ಥಿತಿ ಅತ್ಯಂತ ಶೋಚನೀಯವಾಗಿತ್ತು. ಆದರೆ ರಾಜ್ಯ ಸರ್ಕಾರವು ತಾಲ್ಲೂಕು ಮಟ್ಟದಲ್ಲಿ ಕಾರ್ಮಿಕರು ಮತ್ತು ನಿರಾಶ್ರಿತರಿಗಾಗಿ ಸ್ಥಳೀಯ ಆಡಳಿತದ ಮೂಲಕ ಮದುವೆ ಮಂಟಪ, ಹಾಸ್ಟೆಲ್‌ ಮುಂತಾದೆಡೆನಿರಾಶ್ರಿತರ ಕೇಂದ್ರಗಳನ್ನು ತೆರೆಯಿತು. ಸುಮಾರು ಎರಡು ತಿಂಗಳು ಅವರಿಗೆ ದಿನದ ಮೂರೂ ಹೊತ್ತು ಹೊಟ್ಟೆ ತುಂಬುವಷ್ಟು ಬಿಸಿಯೂಟವನ್ನು ಕೊಟ್ಟು ಸಲಹಿತು. ಇದನ್ನು ಒಬ್ಬ ಕೊರೊನಾ ಸೈನಿಕನಾಗಿ ಅರಸೀಕೆರೆಯ ನಿರಾಶ್ರಿತರ ಕೇಂದ್ರದಲ್ಲಿ ಕಣ್ಣಾರೆ ಕಂಡಿದ್ದಲ್ಲದೆ, ಅವರಿಗೆಲ್ಲ ಕೈಯಾರೆ ಅಡುಗೆಯನ್ನು ಬಡಿಸಿ ಅವರು ಹೊಟ್ಟೆ ತುಂಬಿಕೊಳ್ಳುವುದನ್ನು ನೋಡಿ ಆನಂದಿಸಿದ್ದೇನೆ.

ನಿರ್ಗತಿಕರು, ಭಿಕ್ಷುಕರು, ಕೈಲಾಗದವರೆಲ್ಲ ಕೇಂದ್ರದ ಒಂದೇ ಕುಟುಂಬದ ಸದಸ್ಯರಂತೆ ಕೂಡಿ ಬಾಳಿದ್ದು
ವರ್ಣಿಸಲಸದಳ. ಆದರೆ ಲಾಕ್‌ಡೌನ್‌ ತೆರವಾದ ನಂತರ ಆ ವ್ಯವಸ್ಥೆ ಸ್ಥಗಿತವಾಗಿ, ಭಿಕ್ಷುಕರೆಲ್ಲ ಪುನಃ ಬೀದಿಗೆ ಬಿದ್ದಿದ್ದಾರೆ. ತಾಲ್ಲೂಕುಗಳಲ್ಲಿ ಇಂತಹ ನಿರಾಶ್ರಿತರ ಶಿಬಿರಗಳನ್ನು ಶಾಶ್ವತವಾಗಿ ತೆರೆಯುವ ಅಗತ್ಯವಿಲ್ಲದಿದ್ದರೂ ಕೊರೊನಾ ಸಂಕಷ್ಟದ ಈ ಸಮಯದಲ್ಲಿ, ಯಾವುದಾದರೂ ಒಂದು ಸ್ಥಳವನ್ನು ಗುರುತಿಸಿ ಭಿಕ್ಷುಕರು, ಕೈಲಾಗದವರಿಗೆ ದಿನಕ್ಕೆ ಕನಿಷ್ಠ ಎರಡು ಬಾರಿಯಾದರೂ ಅನ್ನ, ಸಾರನ್ನಾದರೂ ನೀಡಬೇಕು. ಹೀಗೆ ಮೊದಲು ಇಂತಹವರ ಹಸಿವು ನೀಗಿಸಿ, ಬಳಿಕ ಅವರ ಜೀವನ, ವೃತ್ತಿ, ಆರೋಗ್ಯದ ಕಡೆ ಗಮನ ಹರಿಸಬಹುದು.

-ಸರ್ದಾರ್ ಎಂ. ತನಾಝ್,ಅರಸೀಕೆರೆ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.