ADVERTISEMENT

ಕಲಿತವನು ಬಿಸಾಡುವುದು, ಕಲಿಯದವನು ಹೆಕ್ಕುವುದು!

ವಾಚಕರ ವಾಣಿ

ಎಚ್.ಎನ್.ಜಯರಾಮ್, ಹಂದಿಕುಂಟೆ.ಸಿರಾ (ತಾ)
Published 28 ಅಕ್ಟೋಬರ್ 2020, 3:23 IST
Last Updated 28 ಅಕ್ಟೋಬರ್ 2020, 3:23 IST

‘ಸಂಸ್ಕೃತಿ ಕಲಿಸದ ಶಿಕ್ಷಣ’ ಎಂಬಚೆನ್ನು ಹಿರೇಮಠ ಅವರ ಲೇಖನವು (ಸಂಗತ, ಅ. 27) ಪ್ರಸಕ್ತ ಸಮಾಜದ ಸ್ಥಿತಿಗೆ ಹಿಡಿದ ಕನ್ನಡಿಯಂತಿದೆ. ಇಂದು ನಮ್ಮಲ್ಲಿ ಶಿಕ್ಷಣ ವ್ಯಾಪಕವಾಗುತ್ತಿದ್ದರೂ ಸುಸಂಸ್ಕೃತರಾಗಿ ಬದುಕಲು ಇಂದಿಗೂ ನಮಗೆ ಸಾಧ್ಯವಾಗದಿರುವುದು ದುರದೃಷ್ಟದ ಸಂಗತಿ. ಸುಶಿಕ್ಷಿತರಾದ ನಾವು ಇಂದು ಸರ್ಕಾರದ ಅಧೀನದಲ್ಲಿರುವ ಜಾಗ, ಕಟ್ಟಡಗಳು, ವಾಹನ ಮತ್ತು ಆಸ್ತಿಗಳನ್ನು ಬಳಸುವಾಗ ನಡೆದುಕೊಳ್ಳುವ ರೀತಿ ಮತ್ತು ಸ್ವಚ್ಛತೆಯನ್ನು ಕಾಪಾಡಿಕೊಳ್ಳದೇ ತೋರುವ ಅಸಡ್ಡೆತನ ನೋಡಿದವರು ನಾಚಿ ತಲೆತಗ್ಗಿಸುವಂತಿರುತ್ತದೆ.

ಕೆಲವು ದಿನಗಳ ಹಿಂದೆ ನಾನು ಬಸ್ಸೊಂದರಲ್ಲಿ ಪ್ರಯಾಣಿಸುವಾಗ, ನನ್ನ ಪಕ್ಕದಲ್ಲಿ ಕುಳಿತಿದ್ದ ಒಬ್ಬರು ಗುಟ್ಕಾ ತಿಂದು, ಕಿಟಕಿ ತೆರೆದಿದ್ದರೂ ಅದರ ಪ್ಯಾಕೆಟ್‌ ಅನ್ನು ಸಹಪ್ರಯಾಣಿಕರ ಎದುರೇ ಬಸ್ಸಿನಲ್ಲಿ ಬಿಸಾಕಿದರು. ನನಗೆ ಕೋಪ ತಡೆಯಲಾಗಲಿಲ್ಲ. ತಕ್ಷಣ ನಾನು ಅವರಿಗೆ ‘ನಿಮ್ಮ ಮನೆಯಲ್ಲೂ ಇದೇ ರೀತಿ ಬಿಸಾಕುವಿರಾ?’ ಎಂದು ಕೇಳಿದೆ. ಅವರಿಗೆ ಸ್ವಲ್ಪ ಮುಜುಗರವಾಗಿ ಕೂಡಲೇ ಅವರು ಆ ಪ್ಯಾಕೆಟ್‌ ಅನ್ನು ಎತ್ತಿ ಹೊರಗೆಸೆದರು. ಆ ಸಂದರ್ಭದಲ್ಲಿ ಬಸ್ಸಿನ ನಿರ್ವಾಹಕರು ಇದನ್ನು ಗಮನಿಸುತ್ತಿದ್ದರೂ ತುಟಿ ಬಿಚ್ಚಲಿಲ್ಲ. ಇಂತಹ ಹತ್ತು ಹಲವು ಉದಾಹರಣೆಗಳು ನಿತ್ಯ ನಮಗೆ ನೋಡಲು ಸಿಗುತ್ತವೆ. ಇಂತಹ ಸಂದರ್ಭದಲ್ಲಿ ನಾವು ನಯವಾಗಿಯೇ ಈ ಜನರನ್ನು ತಿದ್ದುವ ಕೆಲಸವನ್ನು ಮಾಡಬೇಕಾಗುತ್ತದೆ.

ಚಿಕ್ಕವರಿದ್ದಾಗಿನಿಂದಲೇ ನಮ್ಮ ಶಾಲಾ ಪಠ್ಯಪುಸ್ತಕಗಳಲ್ಲಿ ಜೀವನದ ಶಿಷ್ಟಾಚಾರಗಳನ್ನು ಬೋಧಿಸುವ
ವ್ಯವಸ್ಥೆಯಾಗಬೇಕು. ಒಟ್ಟಾರೆ, ಇಂದು ನಮ್ಮ ಶಿಕ್ಷಣ ಏನು ಕಲಿಸುತ್ತದೆಯೆಂದರೆ, ‘ಕಲಿತವನು ಕಸವನ್ನು ಮಾರ್ಗದಲ್ಲಿ ಬಿಸಾಡುವುದು, ಕಲಿಯದವ ಅದನ್ನು ಹೆಕ್ಕುವುದು’!

ADVERTISEMENT

ರಿಯಾಝ್ ಅಹ್ಮದ್, ರೋಣ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.