ಶಾಲಾ ಪಠ್ಯದಲ್ಲಿನ ಒಂದು ವಿಷಯವು ವಿವಾದಕ್ಕೆ ಆಸ್ಪದ ಮಾಡಿಕೊಟ್ಟು, ಅದರಿಂದ ಜಾತಿ–ಸಮುದಾಯಗಳ ಮಧ್ಯೆ ವೈಷಮ್ಯ ಬರುವುದಾದರೆ ಆ ಪಠ್ಯ ವಿಷಯವನ್ನು ತೆಗೆದುಹಾಕುವುದು ಅಥವಾ ಪರಿಷ್ಕರಿಸುವುದು ಹೇಗೆ ‘ಶಿಕ್ಷಣ ವಿರೋಧಿ’ ಆಗುತ್ತದೆ? ಹೇಗೆ ಸಂವಿಧಾನಕ್ಕೆ ಅಪಚಾರ ಮಾಡಿದಂತೆ ಆಗುತ್ತದೆ?
ಇದನ್ನೂ ಓದಿ:ಪಠ್ಯಪುಸ್ತಕವು ಪಕ್ಷ ಪುಸ್ತಕವಲ್ಲ
ಬರಗೂರು ರಾಮಚಂದ್ರಪ್ಪನವರು ‘ಪಠ್ಯಪುಸ್ತಕವು ಪಕ್ಷದ ಪುಸ್ತಕವಲ್ಲ’ ಎಂದಿದ್ದಾರೆ (ಪ್ರ.ವಾ., ನ. 8). ಈಗ ಪ್ರಶ್ನೆ ಇರುವುದು ಪಕ್ಷ ಬಯಸುವ ಪಠ್ಯವನ್ನು ಶಾಲಾ– ಕಾಲೇಜು ಪಠ್ಯದಲ್ಲಿ ಸೇರಿಸಬೇಕು ಎಂಬುದಲ್ಲ. ಟಿಪ್ಪುವಿನ ಪಠ್ಯ ಏಕಮುಖವಾಗಿದೆ ಎನ್ನುವುದು. ಟಿಪ್ಪುವಿನ ಕರಾಳ ಮುಖವಾದ ಮತಾಂತರ, ದೇವಸ್ಥಾನ ಧ್ವಂಸ, ಸಮುದಾಯವೊಂದರ ಸಾಮೂಹಿಕ ಕೊಲೆ, ಮತಾಂಧತೆಯಿಂದ ಜನಸಾಮಾನ್ಯರು ಅನುಭವಿಸಿದ ಕಷ್ಟ ಕೋಟಲೆಗಳನ್ನು ಒಳಗೊಂಡ ಅಂಶವನ್ನು ಕೈಬಿಡಲಾಗಿದೆ ಎನ್ನುವುದು.
ಇದು ಚರಿತ್ರೆಯ ಸತ್ಯ ಅಲ್ಲವೇ? ಇದು ಪಕ್ಷದ ವಿಚಾರ ಹೇಗಾಗುತ್ತದೆ? ಕೊಡಗಿನಲ್ಲಿ ಟಿಪ್ಪು ಕ್ರೌರ್ಯದಿಂದ ಬೇರೊಂದು ಸಮುದಾಯವೇ ಸೃಷ್ಟಿಯಾಗಿದೆ (ಕೊಡವ ಮಾಪಿಳ್ಳೆಗಳು). ಇವರು ಕೊಡವರಾಗಿದ್ದು ಬಲಾತ್ಕಾರದಿಂದ ಮತಾಂತರಗೊಂಡವರು. ಕೊಡಗಿನವರ ಮನೆಮನೆಗಳಲ್ಲಿ ನೋವಿನ ನೂರಾರು ಕತೆಗಳು ಮಡುಗಟ್ಟಿ ನಿಂತಿವೆ. ಇದು ಚರಿತ್ರೆಯ ಕಠೋರ ಸತ್ಯ. ನೋವುಂಡವರಿಗೆ ತಾನೇ ನೋವೇನು ಎಂಬುದು ಗೊತ್ತಾಗುವುದು! ಇನ್ನು ಟಿಪ್ಪುಗೆ ಪ್ರತಿಯಾಗಿ ಸಾವರ್ಕರ್ ಪ್ರಶ್ನೆ. ಸಾವರ್ಕರ್ ಬಗ್ಗೆ ಆರೋಪಗಳು ಚರಿತ್ರೆಯಲ್ಲಿ ದಾಖಲಾಗಿದ್ದರೆ ಅವನ್ನು ಪಠ್ಯದಲ್ಲಿ ದಾಖಲಿಸಿ. ಬೇಡ ಅಂದವರು ಯಾರು? ಸಾವರ್ಕರ್ ಬಗ್ಗೆಯೂ ಚರ್ಚೆಯಾಗಲಿ.
-ಅಡ್ಡಂಡ ಕಾರ್ಯಪ್ಪ, ಪೊನ್ನಂಪೇಟೆ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.