ADVERTISEMENT

ಮಾಕಳಿ ಬೇರು: ನೆನಪಾಗಷ್ಟೇ ಉಳಿಯದಿರಲಿ

​ಪ್ರಜಾವಾಣಿ ವಾರ್ತೆ
Published 23 ಫೆಬ್ರುವರಿ 2020, 19:45 IST
Last Updated 23 ಫೆಬ್ರುವರಿ 2020, 19:45 IST

‘ಆಲಿಸಿ... ಕಾನನದ ಕೂಗು’ ಎಂಬ ಜಿ.ಎಸ್. ಜಯದೇವ ಅವರ ಲೇಖನ (ಪ್ರ.ವಾ., ಫೆ. 22) ಬಹಳ ಸಮಂಜಸವಾಗಿದೆ. ಬೆಂಗಳೂರಿಗೆ ತೀರಾ ಸಮೀಪದಲ್ಲಿರುವ ಸಾವನದುರ್ಗ ಕಾಡಿನಲ್ಲೂ ಮಾಕಳಿ ಅಥವಾ ಮಾಗಳಿ ಬೇರು ದೊರೆಯುತ್ತದೆ‌. ಅತಿಯಾದ ಹಾಗೂ ಅವೈಜ್ಞಾನಿಕವಾದ ಸಂಗ್ರಹದಿಂದ ಈ ಬಳ್ಳಿಯು ಅಳಿವಿನಂಚಿಗೆ ಬಂದಿದೆ. ಈ ಬೇರಿನ ಸಂಗ್ರಹವನ್ನು ಪರಿಸರವಾದಿ ಯಲ್ಲಪ್ಪ ರೆಡ್ಡಿಯವರ ಸಲಹೆಯ ಮೇರೆಗೆ ಅರಣ್ಯ ಇಲಾಖೆಯು ನಿಷೇಧಿಸಿತ್ತು. ಆದರೆ 2019ರಲ್ಲಿ ಸ್ಥಳೀಯರು ಅರಣ್ಯ ಹಕ್ಕು ಕಾಯ್ದೆಯಡಿ ಅದರ ಸಂಗ್ರಹಕ್ಕೆ ಮುಂದಾದರು. ಇವರು ನಿಜವಾದ ಹಕ್ಕುದಾರರೋ ತಿಳಿಯದು. ಇವರಿಗೆಲ್ಲಾ ಸುಸ್ಥಿರ ಸಂಗ್ರಹದ ಕುರಿತು ತರಬೇತಿ ನೀಡಿದ್ದರೂ ಉತ್ತಮ ಸಂಗ್ರಹ ಪದ್ಧತಿಗಳನ್ನು ಪಾಲಿಸದೆ, ಮನಸೋಇಚ್ಛೆ ಬೇರಿನ ಸಂಗ್ರಹವನ್ನು ಮಾಡಲಾಗಿದೆ.

ಈ ಅರಣ್ಯದಲ್ಲೀಗ ಬರೀ ಬಳ್ಳಿಗಳು ಬೇರಿಲ್ಲದೇ ನೇತಾಡುವುದನ್ನು ಕಂಡರೆ ಮನ ಕಲಕುತ್ತದೆ. ಈ ಬೇರುಗಳನ್ನು ತಮಿಳುನಾಡಿನ ಒಬ್ಬ ವ್ಯಾಪಾರಿಗೆ ಪ್ರತಿ ಕೆ.ಜಿಗೆ ₹ 70-100ಕ್ಕೆ ಮಾರಾಟ ಮಾಡಲಾಗಿದೆ. ಸ್ಥಳೀಯರು ತಮ್ಮ ಆದಾಯಕ್ಕಾಗಿ, ಅಳಿವಿನಂಚಿನಲ್ಲಿರುವ ಈ ಬೇರಿನ ಮೇಲೆ ಅವಲಂಬಿತರಾಗಿರುವುದು ಒಂದು ವಿಡಂಬನೆಯೇ ಸರಿ. ಇಲ್ಲಿಯ ಗ್ರಾಮ ಅರಣ್ಯ ಸಮಿತಿಗಳಿಗೆ ತಮ್ಮ ಹಕ್ಕು, ಕರ್ತವ್ಯಗಳ ಕುರಿತು ಮಾಹಿತಿಯ ಕೊರತೆ ಇದೆ. ಹೋದ ವರ್ಷವೇ ಶೇ 80ರಷ್ಟು ಬೇರನ್ನು ತೆಗೆದಿದ್ದಾರೆ. ಈ ವರ್ಷವೂ ಹೀಗೇ ಮುಂದುವರಿದರೆ, ಅಲ್ಲಿಗೆ ಸಾವನದುರ್ಗ ಕಾಡಿನಲ್ಲಿ ಮಾಕಳಿ ಬೇರು ಬರೀ ನೆನಪಾಗಿ ಉಳಿಯುತ್ತದೆ.

ದೀಪಾ ಶ್ರೀವತ್ಸ, ಬೆಂಗಳೂರು

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.