ಕಾಂಗ್ರೆಸ್ ನಾಯಕತ್ವವನ್ನು ಟೀಕಿಸುತ್ತಿರುವ ಪಕ್ಷದ ಮುಖಂಡರ ವಿರುದ್ಧ ಮಲ್ಲಿಕಾರ್ಜುನ ಖರ್ಗೆ ಕಿಡಿ ಕಾರಿದ್ದಾರೆ (ಪ್ರ.ವಾ., ನ. 20). ಕೆಲವು ಹಿರಿಯ ಕಾಂಗ್ರೆಸ್ಸಿಗರು ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿಯವರಿಗೆ ತಿಂಗಳ ಹಿಂದೆ ಪತ್ರ ಬರೆದು, ಪಕ್ಷವು ಚುನಾವಣೆಗಳಲ್ಲಿ ಸತತವಾಗಿ ಸೋಲುತ್ತಿರುವುದರ ಬಗ್ಗೆ, ಪಕ್ಷದ ನೇತೃತ್ವದ ಸರ್ಕಾರಗಳು ಅಸ್ಥಿರವಾಗುತ್ತಿರುವ ಬಗ್ಗೆ ತಮ್ಮ ನೋವನ್ನು ತೋಡಿಕೊಂಡಿದ್ದರು. ಪಕ್ಷವನ್ನು ಬಲಪಡಿಸುವುದಕ್ಕೆ ಪೂರಕವಾದ ವಿಚಾರಗಳನ್ನು ಚರ್ಚಿಸುವುದಕ್ಕಾಗಿ ಸಭೆ ಕರೆಯಬೇಕೆಂದು ವಿನಂತಿಸಿದ್ದರು. ಆದರೆ ಅವರು ಈ ಪತ್ರವನ್ನು ಗಣನೆಗೆ ತೆಗೆದುಕೊಳ್ಳಲೇ ಇಲ್ಲ.
ಹೀಗಿರುವಾಗ ಖರ್ಗೆಯವರು ‘ಪಕ್ಷದ ಸಿದ್ಧಾಂತ ನಾಶವಾದರೆ ನಾವೆಲ್ಲಾ ನಾಶವಾಗುತ್ತೇವೆ’ ಎಂದಿದ್ದಾರೆ. ಪತ್ರ ಬರೆದಿದ್ದ ಮುಖಂಡರು ಪಕ್ಷದ ಅಪ್ಪಟ ನಾಯಕರು. ಇವರು ಪಕ್ಷದ ಸಿದ್ಧಾಂತವನ್ನು ಎಂದೂ ಪ್ರಶ್ನಿಸಿಯೇ ಇಲ್ಲ, ಪಕ್ಷವನ್ನು ದುರ್ಬಲಗೊಳಿಸಿಯೂ ಇಲ್ಲ. ಹೀಗಿದ್ದರೂ ಪಕ್ಷದ ಬಗ್ಗೆ ತಮ್ಮಷ್ಟೇ ಬದ್ಧತೆ ಹೊಂದಿರುವವರ ವಿರುದ್ಧ ಖರ್ಗೆಯವರು ವಿನಾಕಾರಣ ಕಿಡಿ ಕಾರುವುದು ಸರಿಯಲ್ಲ.
-ಎಲ್.ಕೃಷ್ಣ,ಶಿರಾ, ತುಮಕೂರು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.