ADVERTISEMENT

ಪೂರ್ವಾರ್ಧ ಸರಿ; ಉತ್ತರಾರ್ಧ...?

​ಪ್ರಜಾವಾಣಿ ವಾರ್ತೆ
Published 4 ಏಪ್ರಿಲ್ 2019, 19:10 IST
Last Updated 4 ಏಪ್ರಿಲ್ 2019, 19:10 IST

‘ಚುನಾವಣೆ, ಸಿನಿಕತನ ಮತ್ತು ವಸ್ತುಸ್ಥಿತಿ’ ಎಂಬ ಲೇಖನದಲ್ಲಿ(ಪ್ರ.ವಾ., ಏ.3) ಟಿ.ಎನ್.ವಾಸುದೇವಮೂರ್ತಿ ಅವರು ಅಸಹಿಷ್ಣು ಮತ್ತು ಸಿನಿಕತನದ ಮತದಾರರ ನಿಲುವನ್ನು ವಿಶ್ಲೇಷಿಸಿದ್ದಾರೆ. ‘ನರೇಂದ್ರ ಮೋದಿ ನೇತೃತ್ವದ ಆಡಳಿತ ಯಾವ ‘ಅಚ್ಛೇ ದಿನ’ವನ್ನೂ ನಮಗೆ ದಯಪಾಲಿಸಲಿಲ್ಲ, ಹಾಗೆಯೇ ಕರಾಳ ದುರ್ದಿನವನ್ನೂ ಕೊಡಲಿಲ್ಲ’ ಎಂದಿದ್ದಾರೆ.

ಈ ಹೇಳಿಕೆಯಲ್ಲಿ ಪೂರ್ವಾರ್ಧ ಸರಿ; ಆದರೆ ಉತ್ತರಾರ್ಧದ ಹೇಳಿಕೆಯನ್ನು ಹೇಗೆ ಒಪ್ಪುವುದು? ಲೇಖಕರು ತಾವು ಆ ಕಡೆಯೂ ಇಲ್ಲ, ಈ ಕಡೆಯೂ ಇಲ್ಲವೆಂಬ ತಟಸ್ಥ ಧೋರಣೆಯಿಂದ ಬರೆದಂತಿದೆ. ಅವರ ಅಭಿಪ್ರಾಯದಲ್ಲಿ, ಮೋದಿ ಅವರ ಆಡಳಿತದಲ್ಲಿ ಇನ್ನೂ ಏನನ್ನು ಮಾಡಿದ್ದರೆ ‘ಕರಾಳ ದುರ್ದಿನ’ ಬರುತ್ತಿತ್ತು ಎಂಬುದು
ತಿಳಿಯುವುದಿಲ್ಲ.

ನೋಟು ರದ್ದತಿಯಿಂದ ಜನಸಾಮಾನ್ಯರ ಬದುಕು ಛಿದ್ರವಾಯಿತು. ಇದ್ದ ಉದ್ಯೋಗ ಕೈಬಿಟ್ಟು ಬೀದಿಗೆ ಬಿದ್ದಿದ್ದು, ದಲಿತರು ಹಾಗೂ ಅಲ್ಪಸಂಖ್ಯಾತರನ್ನು ಗೋವಿನ ಕಾರಣಕ್ಕೆ, ಅಂತೆಯೇ ಇತರ ಕ್ಷುಲ್ಲಕ ಕಾರಣಕ್ಕೆ ಕೊಂದಿದ್ದು... ಇವೆಲ್ಲಾ ಕರಾಳ ಅಲ್ಲವೇ?

ADVERTISEMENT

ಸಂವಿಧಾನವನ್ನು ಬದಲಾಯಿಸುವ ಹೇಳಿಕೆ ಕೊಡುವ ಸಚಿವರನ್ನು ಹೊಂದಿ, ಕಳವಳವನ್ನು ಬಿತ್ತುತ್ತಿರುವ ಸನ್ನಿವೇಶ ಕರಾಳವಲ್ಲವೇ? ಲೇಖಕರಿಗೆ ತಾನು ಪೂರ್ವಗ್ರಹರಹಿತನಾಗಿ ಬರೆಯುತ್ತಿದ್ದೇನೆ ಎಂಬ ಎಚ್ಚರದಲ್ಲೂ ಬುದ್ಧಿಜೀವಿಗಳು ಮತ್ತು ಆಡಳಿತ ಪಕ್ಷದ ಬಗ್ಗೆ ಭಯಂಕರ ಪೂರ್ವಗ್ರಹವಿರುವುದು ಕಡುವ್ಯಂಗ್ಯವಲ್ಲದೆ ಮತ್ತೇನು?

-ದೊಡ್ಡಿಶೇಖರ, ಪುತ್ತೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.