ADVERTISEMENT

ಜಾತಿಯ ವಿಷ ಬೀಜ ಬಿತ್ತುವವರು...

​ಪ್ರಜಾವಾಣಿ ವಾರ್ತೆ
Published 26 ನವೆಂಬರ್ 2019, 19:24 IST
Last Updated 26 ನವೆಂಬರ್ 2019, 19:24 IST

ರಾಜ್ಯದಲ್ಲಿ ತಮ್ಮ ನೇತೃತ್ವದ ಸರ್ಕಾರ ಪೂರ್ಣಾವಧಿಯವರೆಗೆ ಇರಬೇಕಾದರೆ, ವೀರಶೈವ-ಲಿಂಗಾಯತ ಸಮುದಾಯದವರ ಒಂದು ಮತವೂ ಬೇರೆ ಪಕ್ಷಗಳಿಗೆ ಹೋಗಬಾರದೆಂದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಮತದಾರರಲ್ಲಿ ಮನವಿ ಮಾಡಿದ್ದಾರೆ (ಪ್ರ.ವಾ., ನ.24). ತಾವು ಮುಖ್ಯಮಂತ್ರಿಯಾಗಲು ಎಲ್ಲ ಸಮುದಾಯದವರೂ ಸಹಕರಿಸಿದ್ದಾರೆ ಎಂದು ಸಹ ಅವರು ಇದೇ ಸಂದರ್ಭದಲ್ಲಿ ಹೇಳಿದ್ದಾರೆ. ಅವರ ಈ ಮಾತುಗಳಲ್ಲಿ ವೈರುಧ್ಯ ಎದ್ದುಕಾಣುತ್ತದೆ.

ಮತ ಯಾಚಿಸುವಾಗ ಎಲ್ಲ ಸಮುದಾಯಗಳ ನಾಯಕರೂ ಇಂತಹ ಆಣಿಮುತ್ತುಗಳನ್ನೇ ಉದುರಿಸಿದರೆ, ಭವಿಷ್ಯದ ಪ್ರಜಾಪ್ರಭುತ್ವವನ್ನು ಊಹಿಸಿ ಕೊಳ್ಳಲೂ ಅಸಾಧ್ಯ. ಹೀಗೆ ಮಾಡಿದರೆ ಸಂವಿಧಾನಕ್ಕೆ ಅಪಚಾರ ಬಗೆದಂತೆ ಆಗುವುದಿಲ್ಲವೇ? ಜಾತಿಯ ಆಧಾರದ ಮೇಲೇ ಮತ ನೀಡಲು ಮತದಾರನನ್ನು ಪ್ರೇರೇಪಿಸಿದಂತೆ ಆಗುವುದಿಲ್ಲವೇ? ವಿಶ್ವದ ಅತಿ ದೊಡ್ಡ ಪ್ರಜಾಪ್ರಭುತ್ವವೆಂದು ಬೀಗುವ ನಮಗೆ ಇಂತಹ ನಡೆಗಳು ಗೌರವ ತರುತ್ತವೆಯೇ? ಸಂವಿಧಾನದ ಆಶಯಗಳಿಗೆ ಬದ್ಧರಾಗಿ ನಡೆದುಕೊಳ್ಳುತ್ತೇವೆಂದು ಪ್ರಮಾಣವಚನ ಸ್ವೀಕರಿಸಿ ಅಧಿಕಾರ ಹಿಡಿಯುವ ನಾಯಕರು, ಅದನ್ನು ಉಲ್ಲಂಘಿಸಿಯೇ ತೀರುತ್ತೇವೆಂದು ಮರುಗಳಿಗೆಯೇ ಮನದಲ್ಲಿ ಪ್ರಮಾಣ ಮಾಡಿರುತ್ತಾರೆ ಎನಿಸುತ್ತದೆ. ಯಾವುದೇ ಪಕ್ಷ ಅಥವಾ ನಾಯಕ ತನ್ನ ಹಿಂದಿನ ಸಾಧನೆಯ ಆಧಾರದ ಮೇಲೆ ಮತ್ತು ಮುಂದೆ ಮಾಡಲಿರುವ ಅಭಿವೃದ್ಧಿ ಕೆಲಸಗಳ ಬಗ್ಗೆ ಮತದಾರನಿಗೆ ಮನವರಿಕೆ ಮಾಡಿಕೊಟ್ಟು ಮತ ಯಾಚಿಸಬೇಕೇ ಹೊರತು, ಅಡ್ಡ ಮಾರ್ಗಗಳಿಂದಲ್ಲ ಎಂಬುದನ್ನು ಅರಿತರೆ ಲೇಸು.

ಪುಟ್ಟೇಗೌಡ, ಬೆಂಗಳೂರು

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.