ನೀರು ಜೀವ ಸಂಕುಲಕ್ಕೆ ಸಂಜೀವಿನಿ. ನೀರಿಲ್ಲದೆ ಬದುಕು ಊಹಿಸಲು ಅಸಾಧ್ಯ. ಆದರೆ ನಮ್ಮ ರಾಜಕೀಯ ನಾಯಕರಿಗೆ ಪ್ರತೀ ವಿಧಾನಸಭೆ, ಲೋಕಸಭಾ ಚುನಾವಣೆ ಬಂದಾಗ ಮಾತ್ರ ನೀರಿನ ಹೋರಾಟದ ನೆನಪಾಗುತ್ತದೆ. ನೀರಿನ ಹೆಸರಿನಲ್ಲಿ ರಾಜಕೀಯ ಮಾಡಿ ಅಧಿಕಾರ ಹಿಡಿಯಲು ಪ್ರಯತ್ನಿಸುತ್ತಾರೆ. ನಂತರ ಆ ಭರವಸೆಗಳನ್ನು ಮರೆತು ಬಿಡುತ್ತಾರೆ. ಉದಾಹರಣೆಗೆ, ಕೃಷ್ಣಾ, ಕಾವೇರಿ, ಎತ್ತಿನಹೊಳೆ, ವಾರಾಹಿ, ಭದ್ರಾ ಮೇಲ್ದಂಡೆ, ಮಹದಾಯಿ, ಮೇಕೆದಾಟು ಯೋಜನೆಗಳಲ್ಲಿ ಇಂತಹ ನಡೆ ಕಂಡುಬಂದಿರುವುದು ಇತಿಹಾಸದಿಂದ ತಿಳಿಯುತ್ತದೆ. ಎಲ್ಲಾ ಯೋಜನೆಗಳ ಕಾಮಗಾರಿಗಳು ಆಮೆಗತಿಯಲ್ಲಿ ಸಾಗುತ್ತವೆ. ಎಲ್ಲಾ ಪಕ್ಷಗಳಿಗೆ ಅಧಿಕಾರಕ್ಕೆ ಬರಲು ರೈತ, ಕೃಷಿ, ನೀರಾವರಿ, ಕಾಲುವೆ, ಅಣೆಕಟ್ಟು ಯೋಜನೆಗಳೇ ಮೆಟ್ಟಿಲು. ಚುನಾವಣೆ ಮುಗಿದ ಮೇಲೆ ಈ ಭರವಸೆಗಳಿಗೆ ಎಳ್ಳುನೀರು.
ರೈತರು ಇಂದು ನೀರು ಬರುತ್ತದೆ ನಾಳೆ ಬರುತ್ತದೆ ಎಂದು ಕಾದು ಕಾದು ಸುಸ್ತಾಗಿ ಹೋಗಿದ್ದಾರೆ. ರಾಜಕೀಯ ನಾಯಕರು ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳುವುದು ಬಿಟ್ಟು ರೈತರ ಕಷ್ಟ,ಸಮಸ್ಯೆಗಳಿಗೆ ಆದಷ್ಟು ಬೇಗ ಸ್ಪಂದಿಸಲಿ. ನೀರಿಗೆ ಸಂಬಂಧಿಸಿದಂತೆ ನ್ಯಾಯಾಲಯಗಳಲ್ಲಿರುವ ಅರ್ಜಿಗಳ ಶೀಘ್ರ ವಿಲೇವಾರಿಗೆ ಪೂರಕವಾದ ಪ್ಯತ್ನಗಳನ್ನು ಮಾಡಿ, ರೈತರಿಗೆ ಆದಷ್ಟು ಬೇಗ ನೀರು ಸಿಗುವಂತೆ ಮಾಡಲಿ.
- ನಬಿಸಾಬ ಆರ್.ಬಿ. ದೋಟಿಹಾಳ,ಕುಷ್ಟಗಿ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.