ಗಂಡ ಹಾಗೂ ಆತನ ಮನೆಯವರ ಕಿರುಕುಳದ ವಿರುದ್ಧ ಐಪಿಎಸ್ ಅಧಿಕಾರಿ ವರ್ತಿಕಾ ಕಟಿಯಾರ್ ಅವರು ಪೊಲೀಸರಿಗೆ ದೂರು ನೀಡಿದ್ದಾರೆ (ಪ್ರ.ವಾ., ಫೆ. 7). ಕೌಟುಂಬಿಕ ದೌರ್ಜನ್ಯ, ಹಲ್ಲೆಯಂತಹ ಅಪರಾಧಗಳನ್ನು ಕಾನೂನಿನ ಮೂಲಕ ನಿಭಾಯಿಸಿ ಹತ್ತಿಕ್ಕುವ ಅತ್ಯುನ್ನತ ಪದವಿಯ ಹುದ್ದೆ ಐಪಿಎಸ್ ಅಧಿಕಾರಿಯದು.
ಅಂಥ ಒಬ್ಬ ಐಪಿಎಸ್ ಅಧಿಕಾರಿಯೇ ತಮ್ಮ ಗಂಡ ನಿತೀನ್ ಸುಭಾಷ್ ಹಾಗೂ ಆತನ ಮನೆಯವರು ವರದಕ್ಷಿಣೆ ತರುವಂತೆ ಪೀಡಿಸುತ್ತಾ ಹಲ್ಲೆ ಮಾಡಿ ಜೀವಬೆದರಿಕೆ ಹಾಕಿರುವುದಾಗಿ ದೂರಿದ್ದಾರೆ. ಇದು ನಿಜವೇ ಆಗಿದ್ದರೆ, ನಾಗರಿಕ ಸಮಾಜ ನಾಚಿಕೆಯಿಂದ ತಲೆತಗ್ಗಿಸುವಂತಹುದು.
ಅತ್ಯಂತ ಗೌರವದ, ಉನ್ನತ ಅಧಿಕಾರದ ಪ್ರತಿಷ್ಠಿತ ಹುದ್ದೆಯಲ್ಲಿರುವ ಮಹಿಳಾ ಅಧಿಕಾರಿಯನ್ನೇ ಹೀಗೆ ಶೋಷಣೆಗೆ ಗುರಿ ಮಾಡುವುದೆಂದರೆ, ಇನ್ನು ಸಾಮಾನ್ಯ ಮಹಿಳೆಯರ ಗತಿ ಏನು? ಸ್ವಾತಂತ್ರ್ಯ ಬಂದು ಏಳು ದಶಕಗಳಾದರೂ ಲಿಂಗ ಸಮಾನತೆಯನ್ನು ಪ್ರತಿಪಾದಿಸುವ ಆದರ್ಶ ಸಂವಿಧಾನವಿದ್ದರೂ ಗೌರವ, ಸ್ವಾಭಿಮಾನದ ಬದುಕು ಮಹಿಳೆಯರಿಗೆ ಮರೀಚಿಕೆಯಾಗಿಯೇ ಉಳಿದಿರುವುದು ದೇಶದ ದೌರ್ಭಾಗ್ಯ.
ಹೆಣ್ಣಿನ ಘನ ವ್ಯಕ್ತಿತ್ವದ ಎಲ್ಲ ವಿಶೇಷ ಗುಣಗಳನ್ನೂ ಗೌಣವಾಗಿಸಿ, ಅವಳನ್ನು ಕೀಳಾಗಿ ಕಾಣುವ ಪುರುಷ ಪಾರಮ್ಯ, ಪರಂಪರಾಗತ ದೃಷ್ಟಿಕೋನ ಬದಲಾಗದೆ ಯಾವ ಪ್ರಗತಿಯೂ ಸಾಧ್ಯವಿಲ್ಲ.
-ಪ್ರೊ. ಎನ್.ವಿ.ಅಂಬಾಮಣಿಮೂರ್ತಿ,ಬೆಂಗಳೂರು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.