ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್ಸಿ) ಜನವರಿಯಲ್ಲಿ ನಡೆಸಬೇಕಿದ್ದ ಪ್ರಥಮ ದರ್ಜೆ ಸಹಾಯಕರ (ಎಫ್.ಡಿ.ಎ) ಹುದ್ದೆಗಳ ನೇಮಕಾತಿ ಪರೀಕ್ಷೆಯನ್ನು ಪ್ರಶ್ನೆಪತ್ರಿಕೆ ಸೋರಿಕೆಯ ಕಾರಣದಿಂದ ರದ್ದುಗೊಳಿಸಿ ಫೆಬ್ರುವರಿ 28ರಂದು ನಡೆಸಿದೆ. ವಿಜಯಪುರದ ಪರೀಕ್ಷಾ ಕೇಂದ್ರವೊಂದರಲ್ಲಿ ಪರೀಕ್ಷೆಗೆ ಹಾಜರಾಗಿದ್ದ ನಮ್ಮ ಸಂಬಂಧಿಯೊಬ್ಬರು ಹಂಚಿಕೊಂಡ ಅನುಭವ ನಮ್ಮಲ್ಲಿ ಕಳವಳವನ್ನುಂಟು ಮಾಡಿತು. ಅವರು ಹೇಳಿದ ಪ್ರಕಾರ, ಕೋಣೆಯಲ್ಲಿ ಕೆಲವರನ್ನು ಹೊರತುಪಡಿಸಿ ಉಳಿದವರೆಲ್ಲರೂ ಅತ್ಯಂತ ಭರದಲ್ಲಿ ನಕಲು ಮಾಡುತ್ತಿದ್ದರಂತೆ. ಪರೀಕ್ಷಾ ಕೋಣೆಯಲ್ಲಿ ಮೊಬೈಲ್ ಬಳಕೆ ನಿಷಿದ್ಧವಾಗಿದ್ದರೂ ಸ್ವತಃ ಪರೀಕ್ಷಾ ನಿರೀಕ್ಷಕರೇ ಮೊಬೈಲ್ ಬಳಸಿ ಅಭ್ಯರ್ಥಿಗಳಿಗೆ ಉತ್ತರ ಹೇಳಿಕೊಟ್ಟರಂತೆ. ಅವರ ಈ ನಡೆಗೆ ನನ್ನ ಸಂಬಂಧಿ ಆಕ್ರೋಶ ವ್ಯಕ್ತಪಡಿಸಿದಾಗ ‘ನಾನುಅಭ್ಯರ್ಥಿಗಳಿಗೆ ಸಹಾಯವಾಗಲೆಂದು ಉತ್ತರಗಳನ್ನು ಹೇಳಿಕೊಡುತ್ತಿದ್ದೇನೆ’ ಎಂದರಂತೆ! ಇಡೀ ಪರೀಕ್ಷಾ ಕೋಣೆ ಸಂತೆಯ ವಾತಾವರಣದಂತೆ ಭಾಸವಾಗುತ್ತಿತ್ತು ಎಂಬುದನ್ನು ಅವರಿಂದ ಕೇಳಿದೆವು.
ಉದ್ಯೋಗ ದೊರಕಿಸಿಕೊಳ್ಳಲು ಪರೀಕ್ಷೆಗೆಂದು ತಿಂಗಳಾನುಗಟ್ಟಲೆ ಗಂಭೀರವಾಗಿ ತಯಾರಿ ನಡೆಸಿ, ಪ್ರಶ್ನೆ ಪತ್ರಿಕೆ ಸೋರಿಕೆಯಿಂದ ಅದಾಗಲೇ ಹೈರಾಣಾಗಿದ್ದ ಅಭ್ಯರ್ಥಿಗಳಿಗೆ, ಇಂತಹ ಘಟನೆಗಳು ವ್ಯವಸ್ಥೆಯ ಬಗ್ಗೆ ಬೇಸರ ಹುಟ್ಟಿಸುತ್ತವೆ. ಆಯ್ಕೆ ಪ್ರಕ್ರಿಯೆಯ ಬಗ್ಗೆ ಸಂಪೂರ್ಣ ನಂಬಿಕೆ ಕಳೆದುಕೊಳ್ಳುವಂತೆ ಮಾಡುತ್ತವೆ. ಇಂತಹ ಅಪ್ರಾಮಾಣಿಕ ವ್ಯವಸ್ಥೆಯ ನಡುವೆ ಸತತ ಪರಿಶ್ರಮ ನಡೆಸಿ ನೌಕರಿ ಪಡೆಯಲು ಮಾಡುವ ಪ್ರಯತ್ನಗಳೆಲ್ಲ ನಿರರ್ಥಕ ಎಂದೆನಿಸುವುದರಲ್ಲಿ ಸಂದೇಹವಿಲ್ಲ. ಮೇಲಿನದು ಕೇವಲ ಒಬ್ಬರ ಅನುಭವವಾದರೆ, ಬೇರೆ ಬೇರೆ ಕೇಂದ್ರಗಳಲ್ಲಿ ಅಭ್ಯರ್ಥಿಗಳ ಕಣ್ಣ ಮುಂದೆ ನಡೆದ ಮೋಸದಾಟಗಳು ಸಾಮಾಜಿಕ ಜಾಲತಾಣಗಳಲ್ಲಿ ಬಿತ್ತರವಾಗಿದ್ದರೂ ಆಯೋಗ ಕಣ್ಣುಮುಚ್ಚಿ ಕುಳಿತಿರುವುದು ದುರದೃಷ್ಟಕರ ವಿಚಾರ.
- ಅರ್ಚನಾ ಖ್ಯಾಡಿ, ಮೇಲುಕೋಟೆ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.