‘ಬ್ಯಾಂಕಿಂಗ್ ನೇಮಕಾತಿಯಲ್ಲಿ ಸ್ಥಳೀಯರಿಗೆ ಅನ್ಯಾಯ’ (ವಾ.ವಾ., ಜ. 8) ಎಂಬ ಪತ್ರದಲ್ಲಿ ವಿಕಾಸ್ ಹೆಗಡೆ ಅವರು ಬ್ಯಾಂಕಿಂಗ್ ನೇಮಕಾತಿಯಲ್ಲಿ ಸ್ಥಳೀಯರಿಗೆ ಆಗುತ್ತಿರುವ ಅನ್ಯಾಯದ ವಾಸ್ತವ ಚಿತ್ರಣ ಕೊಟ್ಟಿದ್ದಾರೆ. ತಮ್ಮದೇ ನಾಡಿನಲ್ಲಿ ಕನ್ನಡಿಗರಿಗೆ ಇಂಥ ಸ್ಥಿತಿ ಬರಲು ಕನ್ನಡಿಗರ ನಿರ್ಲಕ್ಷ್ಯ, ಬ್ಯಾಂಕ್ ಉದ್ಯೋಗದ ಬಗ್ಗೆ ಇರುವ ಕೀಳರಿಮೆಗಳೂ ಕಾರಣ. ನಮ್ಮ ಮಕ್ಕಳು ವೈದ್ಯ ಅಥವಾ ಎಂಜಿನಿಯರ್ ಆಗಬೇಕು, ವಿದೇಶದಲ್ಲಿ ಕೆಲಸ ಮಾಡಿ ಲಕ್ಷ ಲಕ್ಷ ಗಳಿಸಬೇಕು ಎಂಬುದು ನಮ್ಮ ಪಾಲಕರ ಕನಸೇ ವಿನಾ, ನಮ್ಮೂರಲ್ಲಿ ದುಡಿಯಬೇಕು ಎಂದು ಯಾರೂ ಬಯಸುವುದಿಲ್ಲ. ಇದರ ಲಾಭವನ್ನು ಹೊರರಾಜ್ಯದವರು ಪಡೆಯುತ್ತಿದ್ದಾರೆ.
ವಿವಿಧ ರಾಜ್ಯಗಳ ಉದ್ಯೋಗಾಕಾಂಕ್ಷಿಗಳು ಬೆಂಗಳೂರು, ಮೈಸೂರಿನಂಥ ನಗರಕ್ಕೆ ಬಂದು, ಬಾಡಿಗೆಗೆ ರೂಮ್ ಪಡೆದು ಅಥವಾ ಪೇಯಿಂಗ್ ಗೆಸ್ಟ್ಗಳಾಗಿ ಉಳಿದು ಮೂರು ತಿಂಗಳ ಅವಧಿಯ ಕನ್ನಡ ಕೋರ್ಸ್ಗೆ ಸೇರಿ ಪ್ರಮಾಣಪತ್ರ ಪಡೆಯುತ್ತಾರೆ. ಅದಾಗಿ 8-10 ತಿಂಗಳ ಕಾಲ ಬ್ಯಾಂಕಿಂಗ್ ಸ್ಪರ್ಧಾ ಪರೀಕ್ಷೆಯ ತರಬೇತಿ ಪಡೆದು ಇಲ್ಲಿಂದಲೇ ಪರೀಕ್ಷೆ ಬರೆದು ಆಯ್ಕೆಯಾಗುತ್ತಾರೆ. ರಾಜ್ಯದಲ್ಲೇ ಕೆಲಸ ಮಾಡಿ, ಇಲ್ಲಿಯೇ ನೆಲೆಸುತ್ತಾರೆ. ಹೀಗಿರುವಾಗ ನಮ್ಮವರು ತೋರಿದ ನಿರ್ಲಕ್ಷ್ಯಕ್ಕೆ ಹೊರರಾಜ್ಯದವರನ್ನು ದೂಷಿಸುವುದು ಅರ್ಥಹೀನವಲ್ಲವೇ?
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.