ಸ್ವಾತಂತ್ರ್ಯಪೂರ್ವದಿಂದಲೂ ‘ಸಾಮಾಜಿಕ ನ್ಯಾಯ’ಕ್ಕಾಗಿನ ಭಾರತದ ಜನ-ಹೋರಾಟವನ್ನು ಜಾತಿ ಮನಸ್ಸುಗಳು ಅಪಹಾಸ್ಯ ಮಾಡಿದ್ದೇ ಹೆಚ್ಚು. ಇಂದು ಆ ಹೋರಾಟವನ್ನು ಸಂಪೂರ್ಣ ದುರ್ಬಲಗೊಳಿಸಲಾಗುತ್ತಿದೆ ಅಷ್ಟೆ. ಗಮನಿಸಬೇಕಾದ ಮುಖ್ಯ ಅಂಶ, ಆ ಜಾತಿ-ಮನಸ್ಸುಗಳ ಜೊತೆ ನಿಂತು ‘ಸಾಮಾಜಿಕ ನ್ಯಾಯ’ವನ್ನು ದುರ್ಬಲಗೊಳಿಸುತ್ತಿರುವವರು 90ರ ದಶಕದ ಉದಾರವಾದಿ ಆರ್ಥಿಕತೆಯ ಕಾರಣಕ್ಕೆ ದಕ್ಕಿದ ಚೂರುಪಾರು ಶಿಕ್ಷಣ, ಖಾಸಗಿ ಉದ್ಯೋಗವನ್ನೇ ವಿಮೋಚನೆ ಎಂಬ ಪರಕೀಯತೆಯಲ್ಲಿ (Alienation) ಬದುಕುತ್ತಿರುವ ಶೋಷಿತ ವರ್ಗಕ್ಕೆ ಸೇರಿದ ನವ ಮಧ್ಯಮವರ್ಗ ಎಂಬುದು.
ಈ ಗುಂಪಿನಲ್ಲಿ ‘ಸಾಮಾಜಿಕ ನ್ಯಾಯ’ದ ಫಲಾನುಭವಿಗಳಾದ ದಲಿತ, ಹಿಂದುಳಿದ, ಮಹಿಳೆ ಮತ್ತು ಅಲ್ಪಸಂಖ್ಯಾತ ವರ್ಗಕ್ಕೆ ಸೇರಿದ ವಿದ್ಯಾವಂತ ಯುವ ಸಮುದಾಯ ಇರುವ ಸಂಗತಿಯನ್ನು ನಾವು ಜಿ.ಎನ್.ದೇವಿ ಅವರು ಗುರುತಿಸುವಂತೆ, ಅಮ್ನೀಷಿಯಕ್ಕೆ ಒಳಗಾದ ತಲೆಮಾರು ಎನ್ನಬಹುದೇನೋ ಅಥವಾ ಮಾರ್ಕ್ಸ್ ಗುರುತಿಸಿದಂತೆ, ಧರ್ಮ, ಹುಸಿ ಅಸ್ಮಿತೆಗಳ ಅಫೀಮಿಗೆ ಒಳಗಾದ ಜನಾಂಗ ಎನ್ನಬಹುದೇ? ಅಂದಹಾಗೆ ‘ಸಾಮಾಜಿಕ ನ್ಯಾಯ’ವನ್ನು ದುರ್ಬಲಗೊಳಿಸುವುದರ ನಿಜವಾದ ಅರ್ಥ ‘ಸಂವಿಧಾನದ ಆಶಯ’ಗಳನ್ನು ದುರ್ಬಲಗೊಳಿಸುವುದು ಎಂಬುದನ್ನಾದರೂ ನಾವು ಗುರುತಿಸಿಕೊಳ್ಳಬೇಕಿದೆ.
-ಕಿರಣ್ ಗಾಜನೂರು,ಕಲಬುರ್ಗಿ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.