ADVERTISEMENT

‘ಯಾವುದೇ ವೇದಿಕೆಯಲ್ಲಿ ಚರ್ಚಿಸಲು ಸಿದ್ಧ’

ಎಚ್.ಎನ್.ಜಯರಾಮ್, ಹಂದಿಕುಂಟೆ.ಸಿರಾ (ತಾ)
Published 29 ಮೇ 2020, 20:30 IST
Last Updated 29 ಮೇ 2020, 20:30 IST

‘ಭಾರಿ ಸದ್ದಿಗೆ ಅಂಪನ್‌ ಚಂಡಮಾರುತ ಕಾರಣ’ ಎಂಬ ನನ್ನ ಹೇಳಿಕೆಗೆ ಡಾ. ಎಂ.ವೆಂಕಟಸ್ವಾಮಿ ಮತ್ತು ಇತರರು ಬರೆದ ಪತ್ರಕ್ಕೆ (ವಾ.ವಾ., ಮೇ 27) ಈ ಪ್ರತಿಕ್ರಿಯೆ. ಬೆಂಗಳೂರಿನಲ್ಲಿ ಮೇ 20ರಂದು ಕೇಳಿಬಂದ ಸ್ಫೋಟದ ಸದ್ದಿಗೆ ಯುದ್ಧವಿಮಾನ ಹಾರಾಟ ಖಂಡಿತ ಕಾರಣ ಅಲ್ಲ ಎಂದು ನಾನು ಈಗಲೂ ಹೇಳುತ್ತೇನೆ. ವಾತಾವರಣದಲ್ಲಾದ ಬದಲಾವಣೆಯೇ ಇದಕ್ಕೆ ಕಾರಣ. ಇಂತಹ ಸ್ಫೋಟದ ಸದ್ದು ಮರುದಿನ ಪಾಂಡವಪುರದಲ್ಲಿ, ನಂತರ ಮಾಗಡಿಯಲ್ಲಿ ಕೇಳಿಬಂದಿದೆ. ಕಳೆದ ವರ್ಷವೂ ಕೇಳಿಬಂದಿತ್ತು. ಒತ್ತಡ ಹೆಚ್ಚಿರುವ ಜಾಗದಲ್ಲಿ ಗಾಳಿ ವಿಸ್ತರಣೆಯಿಂದಾಗಿ ಈ ರೀತಿಯ ಸ್ಫೋಟ ಕೇಳಿಬರುತ್ತದೆ. ಇದಕ್ಕೆ ‘ಸ್ಕೈ ಕ್ವೇಕ್‌’ ಎಂದು ಕರೆಯುತ್ತಾರೆ.

ನಾನು ಏ.27ರಿಂದಲೂ ಈ ಅಂಪನ್‌ ಚಂಡಮಾರುತವನ್ನು ಗಮನಿಸುತ್ತಾ ಬಂದಿದ್ದೇನೆ. ಈ ರೀತಿಯ ಸೈಕ್ಲೋನ್‌ ವ್ಯವಸ್ಥೆಗೆ ಸೆಮೇರು ಜ್ವಾಲಾಮುಖಿಯಿಂದ ಹೊರಬಿದ್ದ ಆವಿಯೂ ಸೇರಿಕೊಂಡಿರುವುದು ವಾಸ್ತವಾಂಶ.

ಚಾರಿತ್ರಿಕವಾಗಿ ಘಟಿಸಿದ ಭೀಕರ ಸಾಂಕ್ರಾಮಿಕ ರೋಗಗಳ ಹಿಂದೆ, ದೊಡ್ಡ ಮಟ್ಟದ ಜ್ವಾಲಾಮುಖಿಯ ಸ್ಫೋಟವಾಗಿರುವ ವಿಷಯ ಪ್ರತಿಯೊಂದು ಭೂವಿಜ್ಞಾನ ಪಠ್ಯಪುಸ್ತಕದಲ್ಲಿಯೂ ಸಿಗುತ್ತದೆ. ವೈರಾಣುವಿನ ಉಗಮದ ಬಗ್ಗೆ ಮಿಲ್ಲರ್‌– ಯೂರೆ ಪ್ರಯೋಗವನ್ನು ಜ್ಞಾಪಿಸಿಕೊಂಡರೆ ಜ್ವಾಲಾಮುಖಿಯ ಪರಿಸರದಲ್ಲಿ ವೈರಾಣು ಉತ್ಪತ್ತಿ ಹೇಗೆ ಆಗುತ್ತದೆ ಎನ್ನುವುದು ಈ ವಿಜ್ಞಾನಿಗಳಿಗೆ ಹೊಳೆದೀತು.

ADVERTISEMENT

ಹೊಸ ವಿಚಾರಗಳು ವಿಜ್ಞಾನದ ಬೆಳವಣಿಗೆಗೆ ಸಹಾಯಕವಾಗುತ್ತವೆ. ಭೂವಿಜ್ಞಾನ ಹಂತ–ಹಂತವಾಗಿ ಬೆಳೆದಿರುವುದೇ ಇಂತಹ ಹೊಸ ವಿಚಾರಗಳಿಂದ. ಭೂವಿಜ್ಞಾನದಲ್ಲಿ ನಾನು ಅನುಭವ ಹೊಂದಿದ್ದು, 40 ವರ್ಷ ಅಖಿಲ ಭಾರತ ಸೇವೆಯಲ್ಲಿ ಕಾರ್ಯನಿರ್ವಹಿಸಿದ್ದೇನೆ. ಈ ಕುರಿತು ಸಾವಿರ ಪುಟ ಬರೆಯುವಷ್ಟು ಮಾಹಿತಿ ನನ್ನಲ್ಲಿದೆ. ಈ ಬಗ್ಗೆ ಈ ವಿಜ್ಞಾನಿಗಳೊಂದಿಗೆ ಯಾವುದೇ ವೇದಿಕೆಯಲ್ಲಿ ಬಹಿರಂಗವಾಗಿ ಚರ್ಚಿಸಲು ನಾನು ಸಿದ್ಧ.

ಡಾ. ಎಚ್.ಎಸ್.ಎಂ. ಪ್ರಕಾಶ್, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.