‘ಮೀಸಲಾತಿ ಎಲ್ಲಿಯವರೆಗೆ ಬೇಕು ಎಂದು ಫಲಾನುಭವಿಗಳು ಬಯಸುತ್ತಾರೆಯೋ ಅಲ್ಲಿಯವರೆಗೂ ಅದು ಮುಂದುವರಿಯಬೇಕು’ ಎಂಬ ಆರ್ಎಸ್ಎಸ್ನ ಹೇಳಿಕೆ ನೋಡಿ (ಪ್ರ.ವಾ., ಸೆ.10) ಆಶ್ಚರ್ಯವಾಯಿತು. ಮೀಸಲಾತಿಯ ಪ್ರಯೋಜನ ಪಡೆದವರು ಮತ್ತು ಮೀಸಲಾತಿ ಸೌಲಭ್ಯ ಇಲ್ಲದವರ ನಡುವೆ ಸೌಹಾರ್ದ ವಾತಾವರಣದಲ್ಲಿ ಸಂವಾದ ನಡೆಯಬೇಕೆಂಬ ಹೇಳಿಕೆ ನೀಡಿ ಆರ್ಎಸ್ಎಸ್ ಮುಖಂಡ ಮೋಹನ್ ಭಾಗವತ್ ವ್ಯಾಪಕ ಟೀಕೆಗೆ ಗುರಿಯಾಗಿದ್ದರು. ಆದರೆ ಆರ್ಎಸ್ಎಸ್ ತಾನು ಮೀಸಲಾತಿಯ ಪರ ಎಂದು ಒಮ್ಮಿಂದೊಮ್ಮೆಲೇ ಬಿಂಬಿಸಿಕೊಳ್ಳುತ್ತಿರುವುದನ್ನು ನೋಡಿದರೆ, ರಾಜಕೀಯ ಚದುರಂಗದಾಟಕ್ಕೆ ಎಲ್ಲಿ ಮೀಸಲಾತಿಯೇ ದಾಳವಾಗಿ
ಬಿಡುತ್ತದೆಯೋ ಎಂಬ ಕಳವಳ ಉಂಟಾಗುತ್ತಿದೆ.
ಸರ್ಕಾರಗಳು ಕೆನೆಪದರ ನೀತಿಯನ್ನು ಕ್ರಮಬದ್ಧವಾಗಿ ಜಾರಿಗೊಳಿಸದೇ ಇರುವುದರಿಂದ, ಮೀಸಲಾತಿಯ ಫಲಾನುಭವಿಗಳನ್ನು ಗುರುತಿಸಲು ಕಷ್ಟವಾಗುತ್ತಿದೆ. ಜೊತೆಗೆ ಅರ್ಹರು ಅವಕಾಶ ವಂಚಿತರಾಗುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ, ಆರ್ಎಸ್ಎಸ್ ತನ್ನ ಮೀಸಲಾತಿ ಪರ ಹೇಳಿಕೆಗೆ ಬದ್ಧವಾಗಿ ಉಳಿದರೆ ಅದು ಶ್ಲಾಘನೀಯ.
-ನಾಗರಾಜು ಎಲ್., ಬೆಂಗಳೂರು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.