‘ಒಳ ವಿಮರ್ಶಕರು ಬೇಕಾಗಿದ್ದಾರೆ’ ಎಂಬ ಬರಗೂರು ರಾಮಚಂದ್ರಪ್ಪ ಅವರ ವಿಶ್ಲೇಷಣೆಯು (ಪ್ರ.ವಾ., ಜ. 25) ಪ್ರಸ್ತುತ ಸಂದರ್ಭ, ಸನ್ನಿವೇಶಕ್ಕೆ ಅತ್ಯಗತ್ಯವಾಗಿ ಬೇಕಾಗಿರುವ ‘ಲಸಿಕೆ’ಯಂತಿದೆ. ಕೊರೊನಾ ಎಂಬ ಮಹಾ ಸಾಂಕ್ರಾಮಿಕಕ್ಕಿಂತಲೂ ನಮ್ಮೆಲ್ಲರ ಬುದ್ಧಿಗೆ, ನಡೆ-ನುಡಿಗೆ ಇಂತಹ ಲಸಿಕೆ ಅವಶ್ಯವಾಗಿ ಬೇಕಾಗಿದೆ. ‘ನಾವು ನಂಬಿದ ಧರ್ಮ, ಪಕ್ಷ, ಪಂಥಗಳ ಒಳಗಿದ್ದೂ ಹೊರಗೆ ನಿಂತು ನೋಡುವ ಒಳನೋಟ ನಮಗೆ ಬೇಕಲ್ಲವೇ’ ಎಂಬ ಲೇಖಕರ ಪ್ರಶ್ನೆ ಸಂದರ್ಭೋಚಿತವಾಗಿದೆ. ಇಂದು ಒಳನೋಟಕ್ಕಿಂತಲೂ ಅಧಿಕಾರಕ್ಕಾಗಿ, ಅಂತಸ್ತಿಗಾಗಿ, ಪುರಸ್ಕಾರಕ್ಕಾಗಿ ಆತ್ಮವಂಚಿತ, ಅನೈತಿಕ ಹಾಗೂ ಅಂಧಾಭಿಮಾನದ ಓಟವೇ ಹೆಚ್ಚಾಗುತ್ತಿದೆ. ಅಷ್ಟಕ್ಕೂ ಈ ‘ಓಟ’ ತನ್ನ ಬಲದ, ವಿವೇಚನೆಯ ಓಟವಂತೂ ಅಲ್ಲವೇ ಅಲ್ಲ ಎಂಬುದು ಸಮಾಜದ ಇಂದಿನ ವಾಸ್ತವ ಸ್ಥಿತಿಗತಿಯಿಂದ ಗೋಚರಿಸುತ್ತದೆ.
ಇವರ ಓಟಕ್ಕೆ ದಾಳವಾಗಿ ನಮ್ಮ ಮಹಾನ್ ವ್ಯಕ್ತಿಗಳನ್ನು, ಸಾಧಕರನ್ನು ಬಳಸಿಕೊಂಡು, ತಮ್ಮದೇ ಪರಿಧಿಯಲ್ಲಿ ವಿಶ್ಲೇಷಿಸಿ, ವಿಮರ್ಶಿಸಿ ತಮ್ಮ ಆಶೋತ್ತರಗಳನ್ನು ಈಡೇರಿಸಿಕೊಳ್ಳುವಂತಹ ಕಾರ್ಯ ಎಗ್ಗಿಲ್ಲದೇ ನಡೆಯುತ್ತಿರುವುದು ನೋವಿನ ಸಂಗತಿ.
- ಕನಕಾ,ಮು.ಕಮಲಾಪೂರ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.