ಬೆಂಗಳೂರನ್ನು ರಾಜ್ಯದ ರಾಜಧಾನಿ ಎಂಬ ಒಂದೇ ಕಾರಣಕ್ಕೆ ಸಾಮರ್ಥ್ಯ ಮೀರಿ ಬೆಳೆಯಲು ಬಿಟ್ಟ ಪರಿಣಾಮವನ್ನು ಈಗ ಅನುಭವಿಸಬೇಕಾಗಿದೆ. ಜನಸಾಮಾನ್ಯರಿರಲಿ, ಉಳ್ಳವರಿಗೂ ಅದು ಈಗ ಸ್ವರ್ಗವಲ್ಲ ಎಂಬುದು ವೇದ್ಯ. ಕುಟುಂಬ ಯೋಜನೆ ಹೇಗೆ ಮುಖ್ಯವೋ ನಗರ ಯೋಜನೆಯೂ ಅಷ್ಟೇ ಮುಖ್ಯ.
ಅಮೆರಿಕದಲ್ಲಿ ರಾಜಧಾನಿಗಿಂತ ಇತರ ನಗರಗಳೇ ದೊಡ್ಡದಾಗಿವೆ. ಹಾಗೆಂದು ಮಿತಿಯನ್ನು, ಧಾರಣಾ ಸಾಮರ್ಥ್ಯವನ್ನು ಮೀರಲು ಅವರು ಬಿಟ್ಟಿಲ್ಲ. ನಮ್ಮಲ್ಲಿ ಜಿಲ್ಲಾ ಕೇಂದ್ರಗಳಿಗೆ ಹೆದ್ದಾರಿ, ರೈಲು ದಾರಿಗಳಿವೆ. ಕೆಲವೆಡೆ ವಿಮಾನ ನಿಲ್ದಾಣ ಸೌಲಭ್ಯವೂ ಉಂಟು. ಆದರೆ ಆ ನಗರಗಳ ಅಭಿವೃದ್ಧಿ ಕುರಿತು ನಗರ ಯೋಜನಾ ಇಲಾಖೆಯು ತಲೆಕೆಡಿಸಿಕೊಂಡಿಲ್ಲ. ಎಲ್ಲ ಉದ್ದಿಮೆಗಳೂ ಬೆಂಗಳೂರಿನಲ್ಲೇ ಇರಬೇಕೆಂದರೆ ಹೇಗಾದೀತು?
ರಾಜಧಾನಿ ಎಂದಮೇಲೆ ಕೆಲವು ವಿಶೇಷ ಕಚೇರಿಗಳು ಇರಬೇಕಾಗುತ್ತದೆ. ಆದರೆ ಅವುಗಳಿಂದಲೇ ಬೆಂಗಳೂರು ಬೃಹತ್ ಆಗಿಲ್ಲ. ಸಂಕಲ್ಪಶಕ್ತಿ ಇಲ್ಲದಿದ್ದಾಗ, ಯೋಜನಾ ಇಲಾಖೆ ದುರ್ಬಲವಾಗಿರುವಾಗ, ಮುತ್ಸದ್ದಿಗಳು ವಿರಳವಾದಾಗ, ದೂರದೃಷ್ಟಿ ಇಲ್ಲದವರದೇ ದರ್ಬಾರು ಆದಾಗ ನೀರಿನ ಜೊತೆಗೆ ಶುದ್ಧ ಗಾಳಿಯೂ ಉಸಿರಾಡಲು ಸಿಗದು. ಆಕ್ಸಿಜನ್ ಟೋಲ್ ಕೇಂದ್ರಗಳು ಬೇಕಾಗುತ್ತವೆ.
-ಸುಬ್ಬರಾಯಪ್ಪ,ಕೆಸರೆ, ಮೈಸೂರು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.