ನಾವು ಪ್ರಾಥಮಿಕ ಶಾಲೆಯಲ್ಲಿ ಕಲಿಯುತ್ತಿದ್ದಾಗ, ಪರಿಸರ ನಾಶದಿಂದಾಗುವ ಪರಿಣಾಮಗಳ ಕುರಿತು ವಿಜ್ಞಾನ ಶಿಕ್ಷಕರು ವಿವರಿಸುತ್ತಾ, ‘ಭಾರತದ ಪ್ರಮುಖ ನಗರಗಳಲ್ಲಿ ಇಂದು ನೀರನ್ನು ಕೊಳ್ಳುವ ವ್ಯವಸ್ಥೆ ಇದೆ. ಪರಿಸರ ರಕ್ಷಣೆ ಮಾಡದಿದ್ದಲ್ಲಿ ಮುಂದೊಂದು ದಿನ ಈ ವ್ಯವಸ್ಥೆ ನಮ್ಮ ಊರಿಗೂ ಬರಬಹುದು’ ಎಂದಿದ್ದರು. ಆಗ, ನೀರನ್ನು ಕೊಳ್ಳುವ ವ್ಯವಸ್ಥೆಯೇ ನಮಗೆಲ್ಲ ಅಚ್ಚರಿ ತಂದಿತ್ತು. ಆದರೆ, ನಾವು ಪದವಿ ಹಂತಕ್ಕೆ ಬರುವಷ್ಟರಲ್ಲೇ ನಮ್ಮ ಗ್ರಾಮಗಳಲ್ಲಿ ಕುಡಿಯುವ ನೀರನ್ನು ಕೊಳ್ಳುವ ವ್ಯವಸ್ಥೆ ಬಂದಿತ್ತು.
ಈಗ ದೇಶದ ರಾಜಧಾನಿಯಲ್ಲಿ ಉಸಿರಾಟಕ್ಕೆ ಉತ್ತಮ ವಾಯು ಲಭ್ಯವಿಲ್ಲದೆ ತಾತ್ಕಾಲಿಕವಾಗಿ ಆಮ್ಲಜನಕ
ವನ್ನು ಮಾರಾಟ ಮಾಡಲಾಗುತ್ತಿದೆ. ಈಗಲೂ ನಾವೆಲ್ಲಾ ಒಟ್ಟಾಗಿ ಪರಿಸರ ರಕ್ಷಣೆಗೆ ಮುಂದಾಗದಿದ್ದರೆ, ಆಮ್ಲಜನಕ
ವನ್ನು ಕೊಳ್ಳುವ ವ್ಯವಸ್ಥೆ ದೇಶದ ಪ್ರತಿ ಹಳ್ಳಿಗೂ ಕಾಲಿಡುವ ದಿನಗಳು ದೂರವಿಲ್ಲ. ನಮ್ಮ ನಂತರದ ಪೀಳಿಗೆಗೆ, ಸಕಲ ಜೀವರಾಶಿಗೆ ಆರೋಗ್ಯಕರ ಪರಿಸರ ನಿರ್ಮಿಸುವ ಜವಾಬ್ದಾರಿ ನಮ್ಮೆಲ್ಲರದೂ ಹೌದಲ್ಲವೇ? ಮಕ್ಕಳ ದಿನಾಚರಣೆಯ ಈ ಸಂದರ್ಭದಲ್ಲಿ, ‘ಮಗುವಿಗೊಂದು ಮರ’ ಎಂಬ ಪರಿಕಲ್ಪನೆ ಜೀವ ಪಡೆಯಲಿ. ಕನಿಷ್ಠ ಒಂದು ಸಸಿಯನ್ನಾದರೂ ನೆಟ್ಟು, ಬೆಳೆಸಿ, ಆಮ್ಲಜನಕ ಕೊಳ್ಳುವ ದಿನ ಬಾರದಂತೆ ನೋಡಿಕೊಳ್ಳೋಣ.
–ಮಹೇಶ್ವರ ಹುರುಕಡ್ಲಿ, ಬಾಚಿಗೊಂಡನಹಳ್ಳಿ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.